
ಪ್ರಜಾವಾಣಿ ವಾರ್ತೆ
ಹರಪನಹಳ್ಳಿ : ತಾಲ್ಲೂಕಿನ ಇತಿಹಾಸ ಪ್ರಸಿದ್ದ ಕೂಲಹಳ್ಳಿ ಗ್ರಾಮದ ಗೋಣಿಬಸವೇಶ್ವರ ರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ದೇವಸ್ಥಾನದಲ್ಲಿ ಗೋಣಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಜನದಟ್ಟಣೆ ಹೆಚ್ಚಾಗಿತ್ತು. ಜಾತ್ರೆ ನಿಮಿತ್ತ ಮದ್ದಾನೇಶ್ವರ, ವಡ್ಡಟ್ಟೆಮ್ಮ ದೇವಸ್ಥಾನ, ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಸೇರಿ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗ್ರಾಮದ ಕೆರೆಯ ಅಂಗಳದಲ್ಲಿ ನಿರ್ಮಿಸಿದ್ದ ಆಕರ್ಷಕ ರಥಕ್ಕೆ ಕೆಂಪು, ಬಿಳಿ ಸೇರಿದಂತೆ ವಿವಿಧ ಬಣ್ಣಗಳ ಬಾವುಟ, ಪಂಚಗಣಾಧೀಶ್ವರರ ಕಟೌಟಗಳಿಂದ ಅಲಂಕರಿಸಲಾಗಿತ್ತು. ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಮಠದ ಪಟ್ಟಾಧ್ಯಕ್ಷ ಚಿನ್ಮಯಿ ಸ್ವಾಮೀಜಿ, ಅರುಣಕುಮಾರ ಸ್ವಾಮಿ ಹಾಗೂ ಮನೆತನದ ಎಲ್ಲ ಸ್ವಾಮೀಜಿಗಳು ನೇತೃತ್ವದಲ್ಲಿ ಆರಂಭಿಸಿದ ಮೆರವಣಿಗೆಗೆ ಪಟ್ಟದ ಕುದುರೆ, ಅರ್ಚಕರು, ನಂದಿಕೋಲು, ಡೊಳ್ಳು, ಬಾಜ ಭಜಂತ್ರಿಗಳು, ಚಾಮರ, ಧ್ವಜ, ಪಂಜುಗಳು, ಚಾಮರ ಬೀಸುತ್ತಿದ್ದ ಮಹಿಳೆಯರ ತಂಡಗಳು ಮೆರುಗು ನೀಡಿದವು.
ಗೋಣಿ ಬಸವೇಶ್ವರ ದೇವಸ್ಥಾನ, ಕೊಟ್ಟೂರೇಶ್ವರ ಗುಡಿಯಲ್ಲಿ ಪೂಜೆ ಸಲ್ಲಿಸಿ, ಗುರುಬಸವೇಶ್ವರ ಮೂರ್ತಿ ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ರಥವೇರಿಸಲಾಯಿತು. ಸ್ವಾಮಿಯ ಧ್ವಜವನ್ನು ಭಕ್ತ ಅಜ್ಜಯ್ಯರ ನಾಗಪ್ಪ ಅವರು ಬರೋಬ್ಬರಿ ₹ 4,51,101ಕ್ಕೆ ಹರಾಜಿನಲ್ಲಿ ತಮ್ಮದಾಗಿಸಿಕೊಂಡರು. ನೆರೆದ ಭಕ್ತರು ರಥದ ಚಕ್ರಕ್ಕೆ ತೆಂಗಿನಕಾಯಿ, ರಥಕ್ಕೆ ಬಾಳೆ ಹಣ್ಣು, ಉತ್ತುತ್ತಿ ಎಸೆದು ಭಕ್ತಿ ಸಲ್ಲಿಸಿದರು. ಬಳಿಕ ಉತ್ತರಾಭಿಮುಖ ರಥ ಸಾಗಿತು.
ರಥಬೀದಿಯಲ್ಲಿ ವಿವಿಧ ಬಾವುಟ ಹಿಡಿದು ಬೀಸುತ್ತಿದ್ದ ಯುವಕರಿಗೆ ಲಾಠಿ ಬಿಸಿಮುಟ್ಟಿಸಿದ ಪೊಲೀಸರು ಬಾವುಟ ಜಪ್ತಿ ಮಾಡಿಕೊಂಡರು. ಭಕ್ತರು ಬೀದಿಯಲ್ಲೇ ಮಣ್ಣು, ಕಲ್ಲಿನಿಂದ ಮನೆ, ತೊಟ್ಟಿಲು ಮಾದರಿ ರಚಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಿದ್ದ ದೃಶ್ಯ ಗಮನ ಸೆಳೆಯಿತು. ಹೆಚ್ಚು ಜನ ಸೇರಿದ್ದರಿಂದ ರಥೋತ್ಸವ ಮುಕ್ತಾಯದ ಬಳಿಕ ವಾಹನಗಳ ದಟ್ಟಣೆ ಹೆಚ್ಚಾಗಿ ಅಲ್ಲಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು, ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಅರ್ಚಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.