
ಹರಪನಹಳ್ಳಿ: ಒಳಮೀಸಲಾತಿಯಲ್ಲಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಲೆಮಾರಿ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಖಂಡಿಸಿ ಅಲೆಮಾರಿ ಸಮುದಾಯಗಳು ಮೈತುಂಬಾ ಚಾಟಿ ಏಟು ಹೊಡೆದುಕೊಂಡು ಸರ್ಕಾರದ ವಿರುದ್ಧ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಿರೆಕೆರೆ ವೃತ್ತದಲ್ಲಿ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಹಗಲುವೇಷ ಧರಿಸಿದ ರಾಮ, ಲಕ್ಷ್ಮಣ, ಆಂಜನೇಯ, ಸೀತೆ, ಸುಡುಗಾಡು ಸಿದ್ದರು, ಡೊಂಬರು, ಗೋಸಂಗಿ, ಹಂಡಿಜೋಗಿ, ಸಿಂದೋಳ್, ಮೇದಾರ, ಚನ್ನದಾಸರು, ಸಿಳ್ಳೆಕ್ಯಾತರ ಪ್ರದರ್ಶನ ಗಮನ ಸೆಳೆಯಿತು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆಯ ಮೂಲಕ ಶೇ1ರಷ್ಟು ಮೀಸಲಾತಿ ಪ್ರತ್ಯೇಕ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಎಸ್ಸಿ, ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ವಿ.ಸಣ್ಣ ಅಜ್ಜಯ್ಯ, ‘ಎಚ್.ಎನ್.ನಾಗಮೋಹನ್ ದಾಸ ಏಕಸದಸ್ಯ ಆಯೋಗವು 59 ಸೂಕ್ಷ್ಮ ಮತ್ತು ಅಲೆಮಾರಿ ಸಮುದಾಯಗಳನ್ನು ಪ್ರವರ್ಗ –ಎ ರಲ್ಲಿ ಗುರುತಿಸಿ ಶೇ1 ರಷ್ಟು ಪ್ರತ್ಯೇಕ ಒಳಮೀಸಲಾತಿ ನೀಡಿತ್ತು. ಆದರೆ ಸಿ.ಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸ್ಪೃಶ್ಯ ಜಾತಿಗಳಿಗೆ ಅಲೆಮಾರಿಗಳನ್ನು ಸೇರಿಸಿ, ಅಲೆಮಾರಿ ಸಮುದಾಯಗಳ ಪಾಲಿಗೆ ಮರಣಶಾಸನ ಬರೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತ್ಯೇಕ ಶೇ 1ರಷ್ಟು ಒಳಮೀಸಲಾತಿ ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯಗಳು ರುಮ್ಮಿ, ಹಲಗೆ ಸದ್ದುಗಳ ನಡುವೆ ಮೈ ಮೇಲೆ ಚಾಟಿ ಏಟು ಹಾಕಿಕೊಂಡು ಸಿಟ್ಟು ಹೊರಹಾಕಿದರು.
ಬುಡಗ ಜಂಗಮ ಸಮಾಜದ ಅಧ್ಯಕ್ಷ ಅಣ್ಣಪ್ಪ, ಗೋಸಂಗಿ ಪುಟ್ಟರಾಜ, ಎಸ್.ಬಿ.ಮಂಜುನಾಥ, ದುರುಗೇಶ, ನಾಗೇಶ್, ಪುಷ್ಪಾ, ಬಾಬಣ್ಣ, ವಿಜಯ್, ಎಸ್. ಭೀಮಪ್ಪ, ಕಬ್ಬಳ್ಳಿ ಮೈಲಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ಮಾಳ್ಗಿ ಆನಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.