ADVERTISEMENT

ಅತಿ ವೇಗವೇ ಹೊಸಪೇಟೆ ಕಾರು ಅಪಘಾತಕ್ಕೆ ಕಾರಣ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 9:09 IST
Last Updated 17 ಫೆಬ್ರುವರಿ 2020, 9:09 IST
ಹೊಸಪೇಟೆಯಲ್ಲಿ ಅಪಘಾತಕ್ಕೀಡಾಗಿದ್ದ ಕಾರು
ಹೊಸಪೇಟೆಯಲ್ಲಿ ಅಪಘಾತಕ್ಕೀಡಾಗಿದ್ದ ಕಾರು   

ಹೊಸಪೇಟೆ: ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಅಪಘಾತಕ್ಕೆ ಅತಿ ವೇಗದಲ್ಲಿ ಕಾರು ಓಡಿಸಿದ್ದೆ ಪ್ರಮುಖ ಕಾರಣ ಎಂಬುದು ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಡಾಬಾದ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳಿಂದ ತಿಳಿದು ಬಂದಿದೆ.

ಫೆಬ್ರುವರಿ 10ರಂದು ಮಧ್ಯಾಹ್ನ 3.15ಕ್ಕೆ ಕೆಂಪು ಬಣ್ಣದ ಬೆಂಜ್‌ ಕಾರು ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ನಗರದಿಂದ ಬೆಂಗಳೂರಿಗೆ ಹೊರಟಿತ್ತು. ಈ ಕಾರು ಗಂಟೆಗೆ ಸುಮಾರು 120ರಿಂದ 130 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎನ್ನಲಾಗಿದೆ.

ಸಿಸಿಟಿವಿ ವ್ಯಾಪ್ತಿಯಲ್ಲಿ ಹೆದ್ದಾರಿ ಮೂಲಕ ಕಾರು ಕ್ಷಣಾರ್ಧದಲ್ಲಿ ಹಾದು ಹೋಗಿರುವ ದೃಶ್ಯವಷ್ಟೇ ದಾಖಲಾಗಿದೆ. ಅದಾದ ಕೆಲ ನಿಮಿಷಗಳ ಬಳಿಕ ಕಾರಿನಲ್ಲಿ ಗಾಯಗೊಂಡವರು ಜೀಪಿನಲ್ಲಿ ನಗರದ ಕಡೆಗೆ ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ.

ADVERTISEMENT

ವೇಗದಿಂದ ಬಂದ ಕಾರು, ಹೆದ್ದಾರಿ ಬದಿಯ ಚಹಾದಂಗಡಿ ಬಳಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕಗೆ (16) ಡಿಕ್ಕಿ ಹೊಡೆದಿದೆ. ರವಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಸಚಿನ್‌ (27) ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು.

ಕಾರು ಚಾಲಕ ರಾಹುಲ್‌, ಕಾರಿನಲ್ಲಿದ್ದ ರಾಕೇಶ್‌, ಶಿವಕುಮಾರ ಹಾಗೂ ವರುಣ್‌ಗೆ ಗಾಯಗಳಾಗಿದ್ದವು. ರಾಹುಲ್‌ನನ್ನು ಇತ್ತೀಚೆಗೆ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಾಜ್ಯದ ಪ್ರಭಾವಿ ಸಚಿವರ ಮಗನೇ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.