ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ಎಡದಂಡೆಯ ಮುಖ್ಯಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಮುನಿರಾಬಾದ್ನ ಪಂಪಾವನಕ್ಕೆ ನುಗ್ಗಿದ್ದು, ಇಡೀ ಉದ್ಯಾನ ಜಲಾವೃತವಾಗಿದೆ. ಜಲಾಶಯ ಒಡೆದಿಲ್ಲ, ಸುಭದ್ರವಾಗಿದೆ. ಜನರು ಆತಂಕಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಜಲಾಶಯ ಒಡೆದಿದೆ ಎಂದು ಎಲ್ಲೆಡೆ ವದಂತಿ ಹರಡಿದ್ದು, ನದಿ ಪಾತ್ರದ ಜನ ಭಯಭೀತರಾಗಿದ್ದಾರೆ. ಪ್ರಜಾವಾಣಿ ಕಚೇರಿಗೆ ಒಂದಾದ ನಂತರ ಒಂದು ಕರೆಗಳು ಸಾರ್ವಜನಿಕರಿಂದ ಬರುತ್ತಿದ್ದು, ಡ್ಯಾಂ ಒಡೆದಿರುವುದು ನಿಜವೇ ಎಂದು ಕೇಳುತ್ತಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ತುಂಗಭದ್ರಾ ಮಂಡಳಿಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಮುನಿರಾಬಾದ್, ಹಂಪಿ ಸುತ್ತಮುತ್ತ ಆತಂಕ ಮನೆ ಮಾಡಿದೆ.
‘ಯಾರು ಕೂಡ ವದಂತಿ, ಗಾಳಿ ಸುದ್ದಿಗೆ ಕಿವಿಗೊಡಬಾರದು. ಕಾಲುವೆಯಲ್ಲಿ ಬಿರುಕು ಉಂಟಾಗಿ ನೀರು ಹರಿಯುತ್ತಿದ್ದು, ಅದನ್ನು ದುರಸ್ತಿಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ’ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಅಧಿಕಾರಿಯೊಬ್ಬರುತಿಳಿಸಿದರು.
ಕಂಪ್ಲಿ-ಗಂಗಾವತಿ ಸೇತುವೆ ಮೇಲೆ ನೀರು ಇಳಿಮುಖವಾಗಿದ್ದು, ಪುರಸಭೆ ಆಡಳಿತ ಮಂಡಳಿ ಸೇತುವೆ ಮೇಲಿದ್ದ ತ್ಯಾಜ್ಯ ತೆರವುಗೊಳಿಸಲು ಕ್ರಮ ತೆಗೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.