ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಅವರ ನೇತೃತ್ವದ ಓಬುಳಾಪುರಂ ಮೈನಿಂಗ್ ಕಂಪನಿ ಮತ್ತು ಸಹಚರ ಗಣಿ ಕಂಪನಿಗಳು ಸಂಡೂರು ಭಾಗದಲ್ಲಿ ನಡೆಸಿದ್ದ ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ ಆಗಿದೆ ಎನ್ನಲಾದ ₹884 ಕೋಟಿ ನಷ್ಟ ವಸೂಲಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಎಸಿಬಿಯಿಂದ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಭಿಪ್ರಾಯ ಪಟ್ಟಿದೆ.
ಜನಾರ್ದನ ರೆಡ್ಡಿ ಅವರು ಆಂಧ್ರದಿಂದ ಗಣಿಗಾರಿಕೆಗೆ ಅನುಮತಿ ಪಡೆದು, ಕರ್ನಾಟಕದ ಸಂಪತ್ತು ಲೂಟಿ ಮಾಡಿರುವ ಮತ್ತು 29 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ ಎಂದು ಹೇಳಿದ್ದ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮೇ 12ರಂದು ತೀರ್ಪು ನೀಡಿತ್ತು. ಅಕ್ರಮ ಗಣಿಗಾರಿಕೆಯಿಂದ ಕರ್ನಾಟಕಕ್ಕೆ ₹884 ಕೋಟಿ ನಷ್ಟ ಉಂಟಾಗಿರುವುದಾಗಿಯೂ ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ತೀರ್ಪಿನ ಆಧಾರದ ಮೇಲೆ ಆಗಸ್ಟ್ 18ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಗಣಿ ಉದ್ಯಮಿ ಟಪಾಲ್ ಗಣೇಶ್, ಒಎಂಸಿ ಮತ್ತು ಇತರ ಕಂಪನಿಗಳಿಂದ ನಷ್ಟ ವಸೂಲಿ ಮಾಡುವಂತೆ ಮನವಿ ಮಾಡಿದ್ದರು.
ಲೋಕಾಯುಕ್ತ ವರದಿ, ಸಿಇಸಿ ವರದಿ, ಆಂಧ್ರಪ್ರದೇಶ ಸರ್ಕಾರದ ಆದೇಶ, ಎಸ್ಐಟಿ, ಕರ್ನಾಟಕ ಲೋಕಾಯುಕ್ತ ದಾಖಲಿಸಿದ್ದ ಎಫ್ಐಆರ್ಗಳು ಮತ್ತು ಹೈದರಾಬಾದ್ನ ಸಿಬಿಐ ನ್ಯಾಯಾಲಯದ ತೀರ್ಪಿನ್ನು ನಷ್ಟ ವಸೂಲಿಗಾಗಿ ಪರಿಶೀಲನೆ ನಡೆಸುವಂತೆಯೂ ಅವರು ಮನವಿ ಮಾಡಿದ್ದರು.
ಈ ಪತ್ರವನ್ನು ಆಗಸ್ಟ್ 30ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಿದ್ದ ಸರ್ಕಾರ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿತ್ತು. ಅದರಂತೆ ಸೆಪ್ಟೆಂಬರ್ 25ರಂದು ವಾಣಿಜ್ಯ ಮತ್ತು ಕೈಗಾರಿಕಾ (ಎಂಎಸ್ಎಂಇ ಮತ್ತು ಗಣಿ) ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ನಷ್ಟ ವಸೂಲಿಗೆ ತನಿಖಾ ಸಂಸ್ಥೆಗಳಿಂದ ಮಾಹಿತಿ ಸಂಗ್ರಹಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹೈದರಾಬಾದ್ನ ಸಿಬಿಐ, ಎಸಿಬಿ ಈ ಹಿಂದೆ ನಡೆಸಿದ್ದ ತನಿಖೆ ಮತ್ತು ತೀರ್ಪಿನ ಪರಿಣಾಮವಾಗಿ ₹884 ಕೋಟಿ ನಷ್ಟ ವಸೂಲಿಯ ವಿಷಯ ಮುನ್ನೆಲೆಗೆ ಬಂದಿದೆ. ಹೀಗಾಗಿ ತನಿಖಾ ಸಂಸ್ಥೆಗಳಿಂದ ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಡೆಯುವುದು ಅಗತ್ಯ. ಸರ್ಕಾರ ಅಧಿಕೃತವಾಗಿ ಸಿಬಿಐ, ಎಸಿಬಿ ಹೈದರಾಬಾದ್ನೊಂದಿಗೆ ಸಂವಹನ ನಡೆಸಿ ಅಲ್ಲಿಂದ ಅಗತ್ಯವಿರುವ ಎಲ್ಲಾ ದಾಖಲೆಗಳು, ವಿವರಗಳು ಅಥವಾ ಹೊಸ ಸಂಗತಿಗಳನ್ನು ಪಡೆಯಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತನಿಖಾ ಸಂಸ್ಥೆಗಳಿಂದ ಸಂಗ್ರಹಿಸುವ ಮಾಹಿತಿಯು ನಷ್ಟ ವಸೂಲಿ ವಿಚಾರದಲ್ಲಿ ಸರ್ಕಾರಕ್ಕೆ ನೆರವಾಗಲಿದೆ ಎಂಬ ನಿಲುವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಾಳಿದೆ.
ಒಎಂಸಿ ಮತ್ತು ಸಹಚರ ಕಂಪನಿಗಳಿಂದ ರಾಜ್ಯಕ್ಕಾದ ನಷ್ಟ ವಸೂಲಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕು.ಟಪಾಲ್ ಗಣೇಶ್ ಗಣಿ ಉದ್ಯಮಿ
ನಷ್ಟ ನಿರ್ಲಕ್ಷಿಸಿತೇ ಗಣಿ ಇಲಾಖೆ?
‘ಜನಾರ್ದನ ರೆಡ್ಡಿ ವಿರುದ್ದ ಸಿಬಿಐ 2009ರಲ್ಲೇ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿದೆ. 2012 ಚಾರ್ಜ್ಶೀಟ್ ಹಾಕಿತ್ತು. ಕರ್ನಾಟಕಕ್ಕೆ ಆದ ನಷ್ಟದ ವಿವರ ಚಾರ್ಜ್ಶೀಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. 2025ರ ಮೇ ತಿಂಗಳಲ್ಲಿ ಈ ಪ್ರಕರಣದ ತೀರ್ಪು ಪ್ರಕಟವಾಗಿತ್ತು. ಇಷ್ಟಾದರೂ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಷ್ಟ ವಸೂಲಿ ಬಗ್ಗೆ ಚಿಂತಿಸಲು ಟಪಾಲ್ ಗಣೇಶ್ ಅವರ ದೂರು ಅರ್ಜಿಗೆ ಕಾಯಬೇಕಿತ್ತೇ’ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.