ವಿಜಯನಗರ (ಹೊಸಪೇಟೆ): ‘ತೈಲ ಬೆಲೆ ಇಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಟೊ ರಿಕ್ಷಾ, ಟ್ಯಾಕ್ಸಿ, ಲಘು ಗೂಡ್ಸ್ ಚಾಲಕರ ಸಂಘಟನೆಗಳು ಮಾರ್ಚ್ 3ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ. ಅದಕ್ಕೆ ಸಂಘಟನೆಯಿಂದ ಬೆಂಬಲ ಸೂಚಿಸಿ ಭಾಗವಹಿಸಲು ತೀರ್ಮಾನಿಸಲಾಗಿದೆ’ ಎಂದು ಫೆಡರೇಶನ್ ಆಫ್ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಂತೋಷ್ ಕುಮಾರ್ ತಿಳಿಸಿದರು.
ನಗರದ ಶ್ರಮಿಕ ಭವನದಲ್ಲಿ ಭಾನುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ‘ಮಾರ್ಚ್ 3ರಂದು ಬೆಂಗಳೂರಿನ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ರ್ಯಾಲಿ ನಡೆಸಲಾಗುವುದು. ಮಾ. 4ರಿಂದ ವಿಧಾನಸೌಧದ ಮುಂದೆ ಹಗಲು-ರಾತ್ರಿ ಧರಣಿ ನಡೆಸಲಾಗುವುದು’ ಎಂದು ಹೇಳಿದರು.
‘ಬಜೆಟ್ ನಲ್ಲಿ ಚಾಲಕರಿಗೆ ಅಭಿವೃದ್ಧಿ ನಿಗಮ ಅಥವಾ ಕಲ್ಯಾಣ ಮಂಡಳಿಯನ್ನು ಘೋಷಿಸಿ ₹1,000 ಕೋಟಿ ಮೀಸಲಿಡಬೇಕು. ವಾಹನ ಚಾಲಕರಿಗೆ ನಿವೇಶನ, ವಾಹನ ಸ್ಕ್ರ್ಯಾಪ್ ಪಾಲಿಸಿ ತಿದ್ದುಪಡಿ ವಾಪಸಾತಿ, ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಚಾಲಕರಿಗೆ ₹7,500 ಪರಿಹಾರ, ಅಗತ್ಯ ವಸ್ತುಗಳು, ತೈಲ ಬೆಲೆ ಇಳಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವುದು’ ಎಂದು ವಿವರಿಸಿದರು.
‘ರಾಜ್ಯದ ವಿವಿಧ ಭಾಗಗಳ 30 ಸಾವಿರ ಚಾಲಕರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಾಲಕರ ಜೊತೆಗೆ ಅಂಗನವಾಡಿ, ಹಮಾಲಿ, ಕಟ್ಟಡ ಕಾರ್ಮಿಕರು ಭಾಗವಹಿಸುವರು’ ಎಂದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಕೆ.ನಾಗರತ್ನಮ್ಮ, ಕಾರ್ಯದರ್ಶಿ ಕೆ.ಎಂ.ಸ್ವಪ್ನಾ, ಆಟೊ ಡ್ರೈವರ್ಸ್ ಯುನಿಯನ್ಸ್ನ ಬಿ.ಎಸ್. ಯಮುನಪ್ಪ, ಎಸ್. ಅನಂತಶಯನ, ಎಸ್. ವಿಜಯ್ ಕುಮಾರ್, ಶಕುಂತಲಮ್ಮ, ರಾಮಣ್ಣ, ಸದಾನಂದ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.