ಬಳ್ಳಾರಿ: ‘ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಚುನಾವಣೆಗೆ ಮುನ್ನ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ’ ಎಂದು ಎಐಟಿಯುಸಿ ಕಾರ್ಯದರ್ಶಿ ಎಆರ್ಎಂ ಇಸ್ಮಾಯಿಲ್ ಆರೋಪಿಸಿದರು.
ಜ.8–9ರಂದು ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಅಧಿಕಾರದ ಅವಧಿಯಲ್ಲಿ ಮೋದಿ ಬಂಡವಾಳಶಾಹಿಗಳಿಗೆ ಆದ್ಯತೆ ನೀಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಕಾರ್ಮಿಕ ಕಾಯ್ದೆಗಳನ್ನು ಸಡಿಲಗೊಳಿಸಿದ್ದಾರೆ’ ಎಂದು ದೂರಿದರು.
‘ಎಲ್ಐಸಿ, ಬಿಎಸ್ಎನ್ಎಲ್, ಎಚ್ಎಎಲ್ ಸೇರಿದಂತೆ ಸಾರ್ವಜನಿಕ ಸಂಸ್ಥೆಗಳನ್ನು ನಾಶಪಡಿಸಿ, ಖಾಸಗಿಯವರಿಗೆ ಹಸ್ತಾಂತರಿಸುವ ಷಡ್ಯಂತ್ರ ಮುಂದುವರಿದಿದೆ. ಅಂಬಾನಿ ಸ್ವಾಮ್ಯದ ಜಿಯೋ ಸಂಸ್ಥೆಗೆ ಅನೇಕ ರಿಯಾಯಿತಿ ನೀಡಿ ಬಿಎಸ್ಎನ್ಎಲ್ ಮುಚ್ಚಿಹಾಕುವ ದುರುದ್ದೇಶ ಕಾಣಿಸುತ್ತಿದೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರಕ್ಕೆ ಸೇರಿದ ಸಂಡೂರಿನ ದೋಣಿಮಲೈನ ಎನ್ಎಂಡಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದೆ. ಕಾರ್ಮಿಕರು ಅತಂತ್ರರಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದೆ. ಶಿಶು ಅಭಿವೃದ್ಧಿ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಜನವಿರೋಧಿ ಆಡಳಿತ ನಡೆಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್, ಸೋಮಶೇಖರ ಗೌಡ, ಸಿಐಟಿಯು ಕಾರ್ಯದರ್ಶಿ ಜೆ.ಸತ್ಯಬಾಬು, ಸಮಿತಿಯ ಪ್ರಮುಖರಾದ ಟಿ.ಜಿ.ವಿಠಲ್, ಕುಮಾರನಾಯ್ಡು, ಆರ್.ಎಸ್.ಬಸವರಾಜು, ಕೆ.ನಾಗಭೂಷಣರಾವ್, ಆಶಾ ಸಂಘಟನೆಯ ಶಾಂತಾ , ಆದಿಮೂರ್ತಿ, ತಿಪ್ಪಯ್ಯ, ಗಂಗೂನಾಯಕ್ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.