
ಕಂಪ್ಲಿ: ‘ಕಂಪ್ಲಿ ಉತ್ಸವ ಫೆ.11, 12ರಂದು ಮತ್ತು ಕುರುಗೋಡು ಉತ್ಸವ ಫೆ.15, 16ರಂದು ತಲಾ ₹1 ಕೋಟಿ ವೆಚ್ಚದಲ್ಲಿ ಆಚರಿಸಲಾಗುವುದು’ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಸ್ಥಳೀಯ ಪುರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಥಮ ಸಭೆಯಲ್ಲಿ ಮಾತನಾಡಿ, ಉತ್ಸವದ ಲಾಂಛನ ಫೆ.6ರಂದು ಬಿಡುಗಡೆ ಮಾಡಲಾಗುವುದು ಎಂದರು.
ಫೆ.11ರಂದು ಸಂಜೆ ಕೋಟೆ ಪಂಪಾಪತಿ ದೇವಸ್ಥಾನದಿಂದ ಜನಪದ ಕಲಾ ತಂಡಗಳ ಜನಪದ ವಾಹಿನಿಯೊಂದಿಗೆ ಸೋಮಪ್ಪ ಕೆರೆ ಆವರಣ ತಲುಪಿದ ಬಳಿಕ ‘ತುಂಗಾರತಿ’ಯು ವಾರಣಾಸಿ ಅರ್ಚಕರಿಂದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಸುಂದರಿ ಸಕ್ಕರೆ ಕಾರ್ಖಾನೆಯ ಮೈದಾನದಲ್ಲಿ ವಿಶಾಲ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.12ರಂದು ಸಂಜೆ ‘ಕಂಪ್ಲಿ ಉತ್ಸವ’ ಉದ್ಘಾಟನಾ ಸಮಾರಂಭ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ವಿವಿಧ ಇಲಾಖೆ ಸಚಿವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆ ಬಳಿಕ ನಾಡಿನ ಪ್ರಸಿದ್ಧ ಗಾಯಕರ, ಕಲಾವಿದರ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿವೆ ಎಂದರು.
ಅದೇ ರೀತಿ ಕುರುಗೋಡು ಉತ್ಸವ ಫೆ.15ರಂದು ತುಂಗಾರತಿ, ಜನಪದ ಕಲಾವಾಹಿನಿ, ಫೆ.16ರಂದು ಉತ್ಸವದ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು.
ಜನರ ನಿರೀಕ್ಷೆಯಂತೆ ಎರಡೂ ತಾಲ್ಲೂಕಿನಲ್ಲಿ ಉತ್ಸವ ನಡೆಸುತ್ತಿದ್ದು, ಎಲ್ಲ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಬೇಧ ಮರೆತು ಉತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಭಟ್ಟ ಪ್ರಸಾದ್, ಕೆ.ಎಸ್.ಚಾಂದ್ಬಾಷ, ಬಿ.ನಾರಾಯಣಪ್ಪ, ಬಿ. ಸಿದ್ದಪ್ಪ, ಜಿ.ರಾಮಣ್ಣ, ಎಸ್.ಎಸ್.ಎಂ. ಚೆನ್ನಯ್ಯಸ್ವಾಮಿ, ಎನ್.ಎಂ..ಪತ್ರಯ್ಯಸ್ವಾಮಿ, ಮೆಟ್ರಿ ಶಿವಪುತ್ರಪ್ಪ, ಮಸ್ತಾನ್ವಲಿ ಕಡಪ, ಕೆ. ಮನೋಹರ, ಯು. ಜಿಲಾನ್, ಕೆ. ಮನೋಹರ ಹಾಜರಿದ್ದರು.
ಕಂಪ್ಲಿ ಕುರುಗೋಡು ತಾಲ್ಲೂಕಿನಲ್ಲಿ ಪ್ರತಿ ವರ್ಷ ಉತ್ಸವಗಳನ್ನು ನಡೆಸಲು ಬಜೆಟ್ನಲ್ಲಿ ಅನುದಾನ ಮೀಸಲಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಿಸಿದ ಸಚಿವರಿಗೆ ಈಗಾಗಲೇ ಮನವಿ ಮಾಡಿರುವೆಜೆ.ಎನ್.ಗಣೇಶ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.