ADVERTISEMENT

’ನರೇಗಾ ಕಾಯಕ ಜೀವನ ನಿರ್ವಹಣೆಗೆ ಸಹಕಾರಿ‘

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 13:19 IST
Last Updated 8 ಜುಲೈ 2023, 13:19 IST

ಕೊಟ್ಟೂರು: ನರೇಗಾ ಯೋಜನೆ ಕಾರ್ಮಿಕರಿಗೆ ಆಶಾಕಿರಣವಾಗಿದ್ದು ಕಾರ್ಮಿಕರ ಕುಟುಂಬದ ಆರ್ಥಿಕ ಪರಿಸ್ಥಿತಿ ಸದೃಢಗೊಳ್ಳಲು ಸಹಕಾರಿಯಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಎಚ್.ವಿಜಯಕುಮಾರ್ ಹೇಳಿದರು.

ತಾಲ್ಲೂಕಿನ ದೂಪದಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಹೋಬಳಿ ಮಟ್ಟದ ಕಾಯಕ ಬಂಧುಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ಕಾಯಕ ಬಂಧುಗಳ ಕರ್ತವ್ಯ ಹಾಗೂ ಹಕ್ಕುಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು. ಯೋಜನೆಯ ಸ್ವರೂಪ, ಕಾಯ್ದೆ ರೂಪರೇಷೆಗಳು ಹಾಗೂ ಒಗ್ಗೂಡಿಸುವಿಕೆ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಸಾಮಾಜಿಕ ಪರಿಶೋಧನೆಯ ತಾಲ್ಲೂಕು ವ್ಯವಸ್ಥಾಪಕ ಸಕ್ರಪ್ಪ ಧರ್ಮರ್ ಮಾತನಾಡಿ ಸಾಮಾಜಿಕ ಪರಿಶೋಧನೆಯ ಮಹತ್ವ , ಪಾರದರ್ಶಕತೆ ಹಾಗೂ ಕಡತಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಐಇಸಿ ಸಂಯೋಜಕ ಪ್ರಭುಕುಮಾರ್ ಉಪ್ಪಾರ್ ಮಾತನಾಡಿ ಸಾಮಾಜಿಕ ಜಾಲತಾಣಗಳ ಬಳಕೆ, ಮಹಿಳಾ ಸಹಭಾಗಿತ್ವ ಹಾಗೂ ಗ್ರಾಮ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ರವಿನಾಯ್ಕ ಹಾಗೂ ರಾಘವೇಂದ್ರ, ಕರವಸೂಲಿಗಾರರು, ಕಾಯಕ ಬಂಧುಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.