ಬಳ್ಳಾರಿ: ವೇತನ ಪರಿಷ್ಕರಣೆ, ವೇತನ ಬಾಕಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮಂಗಳವಾರದಿಂದ ಆರಂಭಿಸಿರುವ ಬಸ್ ಮುಷ್ಕರ ಬಳ್ಳಾರಿಯಲ್ಲಿ ಬಹುತೇಕ ಯಶಸ್ವಿಯಾಗಿದೆ.
ಮುಷ್ಕರದಿಂದಾಗಿ ಸಾರಿಗೆ ನೌಕರರು ಸೇವೆಯಿಂದ ದೂರವುಳಿದರು. ಬಸ್ಗಳು ಡಿಪೋ ಸೇರಿದ್ದವು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಸಾರಿಗೆ ಬಸ್ಗಳು ಹಾಗೂ ಖಾಸಗಿ ಬಸ್ಗಳಿಗೆ ಸೇವೆ ನೀಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಜನ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಬಳಸಬೇಕಾಯಿತು.
ಸಾರಿಗೆ ನೌಕರರ ಮುಷ್ಕರದ ಬಿಸಿ ಬಳ್ಳಾರಿಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಾರಿಗೆ ಸೇವೆ ನೀಡುವ ಬಸ್ಗಳಿಗೂ ತಟ್ಟಿತು. ಬಸ್ ನಿಲ್ದಾಣಗಳಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್ಗಳು ಸೇವೆಗೆ ಸಜ್ಜಾಗಿದ್ದರೂ ಪ್ರಯಾಣಿಕರು ಇರಲಿಲ್ಲ.
ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡಿದರು. ಹೊಸಪೇಟೆ, ತೋರಣಗಲ್, ಕೊಪ್ಪಳ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ತೆರಳಬೇಕಾದ ಪ್ರಯಾಣಿಕರು ಬಸ್ ಮುಷ್ಕರದಿಂದಾಗಿ ರೈಲುಗಳ ಮೊರೆ ಹೋದರು. ಹೀಗಾಗಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು.
ವಸೂಲಿಗಿಲ್ಲ ಅವಕಾಶ:
ಮುಷ್ಕರ ಹಿನ್ನಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಆರ್ಟಿಒ ಅಧಿಕಾರಿಗಳು, ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಜತೆ ಜಿಲ್ಲಾಡಳಿತ ಸಭೆ ನಡೆಸಿ, ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿತು. ಸರ್ಕಾರ ಸೂಚನೆಯಂತೆ ಖಾಸಗಿ ಬಸ್ಗಳ ಸೇವೆಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ, ಖಾಸಗಿ ವಾಹನಗಳು ಮುಷ್ಕರ ನೆಪದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡದಂತೆ ರೇಟ್ ಕಾರ್ಡ್ ನೀಡಲಾಯಿತು. ಏತನ್ಮಧ್ಯೆ ಸಾರಿಗೆ ಇಲಾಖೆ ಅಧಿಕಾರಿಗಳು ಕೆಲ ಚಾಲಕರು ಹಾಗೂ ನಿರ್ವಾಹಕರ ಮನವೊಲಿಸಿ ಬಸ್ಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದರು. ಬೆಳಿಗ್ಗೆಯಿಂದ ಸಿರುಗುಪ್ಪ, ಕುರುಗೋಡು, ಕಂಪ್ಲಿ, ಮೋಕಾ, ಆದೋನಿ, ಸಂಡೂರು, ಗಂಗಾವತಿ ಸೇರಿದಂತೆ ವಿವಿಧೆಡೆ ಒಂದಷ್ಟು ಬಸ್ಗಳು ಓಡಾಟಕ್ಕೆ ಆಸ್ಪದ ಮಾಡಿಕೊಟ್ಟರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಾರಿಗೆ ಇಲಾಖೆ ಅಧಿಕಾರಿಗಳು ‘ಮುಷ್ಕರದಿಂದ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಖಾಸಗಿ ಬಸ್ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. 82 ಖಾಸಗಿ ಬಸ್ಗಳು, 42 ಕ್ರೂಸರ್, 8 ಮ್ಯಾಕ್ಸಿಕ್ಯಾಬ್, 8 ಟಾಂಟಾಂ ಸೇರಿದಂತೆ ಒಟ್ಟು 140 ಖಾಸಗಿ ವಾಹನಗಳು, 113 ಸಾರಿಗೆ ಬಸ್ಗಳು, 28 ಎಪಿಎಸ್ಆರ್ಟಿಸಿ (ಆಂಧ್ರಸಾರಿಗೆ ಬಸ್ಗಳು), ಒಟ್ಟು 281 ಬಸ್ಗಳು ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದು ತಿಳಿಸಿದರು.
ವಹಿವಾಟು ಮೇಲೆ ಹೊಡೆತ:
ಸಾರಿಗೆ ನೌಕರರ ಬಸ್ ಮುಷ್ಕರದಿಂದಾಗಿ ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿಲ್ಲ. ಹೊರಗಡೆಯಿಂದ ಬರುವ ಜನರನ್ನೇ ಹೆಚ್ಚಾಗಿ ಆಶ್ರಯಿಸಿರುವ ಆರ್ಥಿಕ ವಹಿವಾಟು ಭಾಗಶಃ ಕುಸಿತವಾಗಿತ್ತು.
ನಗರದ ಜಿಲ್ಲಾಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಬರಬೇಕಿದ್ದವರು ಖಾಸಗಿ ವಾಹನ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದರು. ಸಾರಿಗೆ ಬಸ್ಗಳಿಂದ ನಿತ್ಯ ಉಚಿತ ಸೇವೆ ಪಡೆಯುವ ಮಹಿಳೆಯರು ಮುಷ್ಕರದಿಂದಾಗಿ ಖಾಸಗಿ ವಾಹನಗಳ ಮೊರೆ ಹೋದರು. ಮುಷ್ಕರ ಹಿನ್ನಲೆಯಲ್ಲಿ ಬಸ್ ನಿಲ್ದಾಣಗಳ ಬಳಿ ಪೊಲೀಸ್ ಬಂದೋಬಸ್ತ್ ಇತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು.
ಸಂಧಾನ ಮುಂದುವರಿಕೆ
ಬಸ್ ಮುಷ್ಕರದ ನಡುವೆ ಪ್ರಯಾಣಿಕರಿಗೆ ಅನಾನುಕೂಲವಾಗದಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕರು ಹಾಗೂ ನಿರ್ವಾಹಕರಿಗೆ ಮನವೊಲಿಸುವ ಕೆಲಸವನ್ನು ಮುಂದುವರಿಸಿದ್ದಾರೆ. ನೌಕರರ ಪೈಕಿ ಬಹುತೇಕರು ಮುಷ್ಕರದಲ್ಲಿ ಭಾಗಿಯಾಗಿದ್ದು ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರ ಮನವೊಲಿಸುತ್ತಿರುವ ಅಧಿಕಾರಿಗಳು ಹೋರಾಟ ಮಾಡುವವರು ಮಾಡಲಿ. ಇದರ ನಡುವೆ ಪ್ರಯಾಣಿಕರಿಗೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡೋಣ ಎಂದು ಅಧಿಕಾರಿಗಳು ಮನವೊಲಿಕೆಯಲ್ಲಿ ತೊಡಗಿದ್ದಾರೆ. ಮನೆಯಲ್ಲಿರುವ ಚಾಲಕ ನಿರ್ವಾಹಕರಿಗೆ ಕರೆ ಮಾಡಿ ಸೇವೆಗೆ ಬರುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.