ADVERTISEMENT

ಬಳ್ಳಾರಿ: ನೀರು, ನೈರ್ಮಲ್ಯ ಯೋಜನೆಗಳಿಗೆ ಕೆಎಂಇಆರ್‌ಸಿ ಅಸ್ತು

ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದ 26ನೇ ಸಭೆ

ಆರ್. ಹರಿಶಂಕರ್
Published 27 ಫೆಬ್ರುವರಿ 2026, 8:05 IST
Last Updated 27 ಫೆಬ್ರುವರಿ 2026, 8:05 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬಳ್ಳಾರಿ: ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ದ ‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್‌)’ಗಳ 26ನೇ ಸಭೆಯಲ್ಲಿ ರಾಜ್ಯದ ಗಣಿಪೀಡಿತ ಜಿಲ್ಲೆಗಳ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮೇಲ್ವಿಚಾರಣಾ ಪ್ರಾಧಿಕಾರ(ಒ.ಎ)ವೂ ಆಗಿರುವ ಬಿ. ಸುದರ್ಶನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಫೆ.12ರಂದು ಸಭೆ ನಡೆದಿದ್ದು, ಸಭೆಯ ನಡಾವಳಿಗಳು ಸದ್ಯ ‘ಪ್ರಜಾವಾಣಿ’ಗೆ ಲಭ್ಯವಾಗಿವೆ. 

ADVERTISEMENT

66 ಹೊಸ ಯೋಜನೆಗಳಿಗೆ ಸಮ್ಮತಿ: ಕೆಎಂಇಆರ್‌ಸಿ ವ್ಯಾಪ್ತಿಗೆ ಬರುವ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ವ್ಯಾಪ್ತಿಯ ಎಂಟು ಇಲಾಖೆಗಳಿಂದ ಒಟ್ಟು ₹634.57 ಕೋಟಿ ವೆಚ್ಚದ ಒಟ್ಟು 66 ಹೊಸ ಪ್ರಸ್ತಾವನೆಗಳನ್ನು ಮಂಡಿಸಲಾಗಿತ್ತು. ಇವುಗಳಲ್ಲಿ 65 ಯೋಜನೆಗಳು ಅನುಮೋದನೆ ಪಡೆದಿವೆ ಎಂದು ನಿಗಮದ ವ್ಯವಸ್ಥಾಪಿ ನಿರ್ದೇಶಕ ಸಂಜಯ ಬಿಜ್ಜೂರ್‌ ಸಭೆಗೆ ತಿಳಿಸಿದರು.  ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಕಗ್ಗಲಡು ಗ್ರಾಮದಲ್ಲಿ ವಲಸೆ ಹಕ್ಕಿಗಳ ಕುರಿತಾದ ಅಧ್ಯಯನಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಬಳಿಕ ಅನುಮೋದನೆ ನೀಡಲಾಯಿತು. 

ನೀರು, ನೈರ್ಮಲ್ಯದ ಯೋಜನೆಗೆ ಅನುಮೋದನೆ: ಬಳ್ಳಾರಿ ತಾಲ್ಲೂಕಿನ ಆಯ್ದ ಹಳ್ಳಿಗಳಲ್ಲಿ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ₹15.50 ಕೋಟಿಯ ಮೂರು ಪ್ರಸ್ತಾವನೆಗಳನ್ನು ಸಲ್ಲಿಸಿತು.

ರಾಸಾಯನಿಕ ಪ್ರಯೋಗಾಲಯ, ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯ, ಒಎಚ್‌ಟಿಗಳ ನಿರ್ಮಾಣ, ಪೈಪ್‌ಲೈನ್‌ಗಳನ್ನು ಹಾಕುವುದು ಸೇರಿದಂತೆ ಹಲವು ಬಗೆಯ ಕೆಲಸಗಳನ್ನು ಮೂರು ಯೋಜನೆಗಳು ಒಳಗೊಂಡಿರಲಿವೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. 

ಬಳ್ಳಾರಿ ಮತ್ತು ಸಂಡೂರಿನಲ್ಲಿ ನೈರ್ಮಲ್ಯಕ್ಕೆ ಸಂಬಂಧಿಸಿದ ₹78.66 ಕೋಟಿ ವೆಚ್ಚದ ನಾಲ್ಕು ಯೋಜನೆಗಳಿಗೂ ಅನುಮೋದನೆ ದೊರೆಯಿತು.

ಬಳ್ಳಾರಿಯಲ್ಲಿ ಐಟಿಐ ಉನ್ನತೀಕರಣಕ್ಕೆ ಒಪ್ಪಿಗೆ: ಬಳ್ಳಾರಿಯ ಸರ್ಕಾರಿ ಐಟಿಐ ಉನ್ನತೀಕರಣಕ್ಕಾಗಿ ಪ್ರಾಧಿಕಾರವು ಪರಿಷ್ಕೃತ ಆಡಳಿತಾತ್ಮಕ ಅನುಮೋದನೆ ನೀಡಿತು. 

ಟ್ರಾನ್ಸ್‌ಫಾರ್ಮರ್, ಸರ್ವರ್ ರ‍್ಯಾಕ್‌ಗಳು, ವಿಸ್ತೃತ ಸಿವಿಲ್, ವಿದ್ಯುತ್ ಕೆಲಸಗಳು ಮತ್ತು ಸುಧಾರಿತ ಶೈಕ್ಷಣಿಕ ಶ್ರವಣ-ದೃಶ್ಯ ವ್ಯವಸ್ಥೆಗಳಂತಹ ಹೆಚ್ಚುವರಿ ಮೂಲಸೌಕರ್ಯಗಳಿಂದಾಗಿ ಯೋಜನಾ ವೆಚ್ಚವು ₹24.96 ಕೋಟಿಯಿಂದ ₹25.46 ಕೋಟಿಗೆ ಏರಿದೆ. ಪರಿಷ್ಕೃತ ಅನುಮೋದನೆ ನೀಡುವ ಮೊದಲು ಆಂತರಿಕ ಮೇಲ್ವಿಚಾರಣಾ ಸಂಸ್ಥೆಯಿಂದ ಪರಿಶೀಲನೆ ನಡೆಸುವಂತೆ ಅಧ್ಯಕ್ಷರು ಸೂಚಿಸಿದರು.

ರಸ್ತೆಗಳ ಅಭಿವೃದ್ಧಿಗೆ ಮನವಿ: ಧೂಳು, ಮಾಲಿನ್ಯ ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಅನಾನುಕೂಲತೆಗಳನ್ನು ಉಲ್ಲೇಖಿಸಿ ಲೋಕೋಪಯೋಗಿ ಇಲಾಖೆಯು ಗಣಿಗಾರಿಕೆ ವಾಹನಗಳ ಸಂಚಾರದಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ ಆದ್ಯತೆಯ ನಿಧಿಯನ್ನು ಕೋರಿತು.

ರಸ್ತೆ ಮತ್ತು ಸಂಪರ್ಕ ವಲಯದ ಅಡಿಯಲ್ಲಿ ₹2,559.17 ಕೋಟಿಯನ್ನು ಒದಗಿಸಲಾಗಿದೆ. ಈ ಪೈಕಿ ₹2,196.62 ಕೋಟಿ ಈಗಾಗಲೇ ಅನುಮೋದನೆಯಾಗಿದೆ. ₹362.56 ಕೋಟಿ ಬಾಕಿ ಉಳಿದಿದೆ. ಈ ಮೊತ್ತಕ್ಕೆ, ಮಾರ್ಗಸೂಚಿಗಳ ಅನ್ವಯ ಹೊಸ ಪ್ರಸ್ತಾವನೆ ಸಲ್ಲಿಸಬಹುದು ಎಂದು ಕೆಎಂಇಆರ್‌ಸಿ ತಿಳಿಸಿತು.  

ಗಣಿಪೀಡಿತ ಪ್ರದೇಶಗಳ 5 ಕಿ.ಮೀ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತಿವೆ. ಅದರೆ, ಈಗಾಗಲೇ 5 ಕಿ.ಮೀ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿ ಆಗಿದೆ. ಅದನ್ನು ಮೀರಿದ ಪ್ರದೇಶದ ರಸ್ತೆಗಳ ಅಭಿವೃದ್ಧಿಯೂ ಅಗತ್ಯವಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆ ಹೇಳಿತು.  

ಪರಿಸರ ಪುನಃಸ್ಥಾಪನೆಯು ಆದ್ಯತೆಯಾಗಿದ್ದರೂ, ಇಲಾಖೆಗಳು ಸಮರ್ಥನೀಯ ಕಾರಣಗಳನ್ನು ಮುಂದಿಟ್ಟು ರಸ್ತೆ ಪ್ರಸ್ತಾವನೆ ಸಲ್ಲಿಸಬಹುದು ಎಂದು ಮೇಲ್ವಿಚಾರಣಾ ಪ್ರಾಧಿಕಾರ ಹೇಳಿತು.

ವಿಶ್ವ ಪಾರಂಪರಿಕ ತಾಣ ಹಂಪಿ ಅಭಿವೃದ್ಧಿಗೆ ಸಂಬಂಧಿಸಿದ ₹96 ಕೋಟಿ ಮೊತ್ತದ ಯೋಜನೆಯನ್ನು ಸಭೆಯಲ್ಲಿ ಪಕಕ್ಕೆ ಸರಿಸಲಾಗಿದ್ದು, ಮುಂದಿನ ಸಭೆಯಲ್ಲಿ ವಿವರವಾದ ಯೋಜನಾ ವರದಿ ಸಲ್ಲಿಸಲು ಸೂಚಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.