
ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತ ಭಕ್ತರ ದಂಡು ಶುಕ್ರವಾರ ತಂಡೋಪತಂಡವಾಗಿ ಆಗಮಿಸಿ ಹರಕೆ ತೀರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಕೊಟ್ಟೂರೇಶ್ವರ ಸ್ವಾಮಿಯ ಎಲ್ಲಾ ದೇವಸ್ಥಾನಗಳಲ್ಲಿ ರಥೋತ್ಸವ ಜರುಗಿದ ನಂತರ ಹರಕೆ ಹೊತ್ತ ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಹಿರೇಮಠದಲ್ಲಿ ಸ್ವಾಮಿಯ ದರ್ಶನ ಪಡೆಯಲು ಸರದಿ ನಿಂತು ದರ್ಶನ ಪಡೆದರು. ದೇವಸ್ಥಾನದ ದಾರಿಯುದ್ದಕ್ಕೂ ಶಾಮಿಯಾನ ಹಾಕಿ ನೆರಳನ್ನು ಕಲ್ಪಿಸಲಾಗಿತ್ತು.
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ದೀಡು ನಮಸ್ಕಾರ ಸೇವೆಯನ್ನು ಸಲ್ಲಿಸಿದರು. ರೈತಾಪಿ ವರ್ಗ ಅಲಂಕೃತ ಎತ್ತುಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮುಖಾಂತರ ಸಾಗಿ ದೇವಸ್ಥಾನದ ಆವರಣದಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಜಾತ್ರೆಯಲ್ಲಿ ಬಳೆ, ಆಟಿಕೆ ಸಾಮಾಗ್ರಿಗಳ ಅಂಗಡಿಗಳಲ್ಲಿ ಹಾಗೂ ಕೊಟ್ಟೂರಿನ ವಿಶೇಷ ತಿನಿಸಾದ ಮಂಡಕ್ಕಿ ಮಿರ್ಚಿ ವ್ಯಾಪಾರ ಎಲ್ಲೆಡೆ ಜೋರಾಗಿತ್ತು. ನಾಟಕ ಕಂಪನಿಗಳು ಹಾಗೂ ವಸ್ತು ಪ್ರದರ್ಶನ ಮುಂತಾದ ಕಡೆ ಜನ ಜಂಗುಳಿಯಿಂದ ಕೂಡಿತ್ತು.
ಕಳೆದರೆಡು ದಿನಗಳಿಂದ ಜಾತ್ರಾ ವಿಶೇಷ ಸಾರಿಗೆ ಬಸ್ಸುಗಳೊಂದಿಗೆ ಖಾಸಗಿ ಬಸ್ಸುಗಳ ಸೌಕರ್ಯದಿಂದ ಭಕ್ತಾದಿಗಳ ಪ್ರಯಾಣಕ್ಕೆ ತೊಂದರೆಯಾಗಲಿಲ್ಲ. ಪಟ್ಟಣದಲ್ಲಿ ಭಾರೀ ವಾಹನಗಳ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿರ್ಬಂಧಿಸಿದ್ದರಿಂದ ಜನರ ಸುಗಮ ಸಂಚಾರಕ್ಕೆ ಸಹಾಯವಾಯಿತು. ಸೂಕ್ತ ಬಂದೋಬಸ್ತ್ ಹಾಗೂ ಮುಂಜಾಗ್ರತೆ ಕ್ರಮ ಕೈಗೊಂಡ ಪರಿಣಾಮ ಯಾವುದೇ ಅಹಿತಕರ ಘಟನೆಗಳು ನಡೆಯದಿರುವುದು ಕಂಡುಬಂದಿತು.
ಪಟ್ಟಣದ ದೇವಸ್ಥಾನಗಳ ಆವರಣ, ಎಪಿಎಂಸಿ ಹಾಗೂ ತೇರು ಬಯಲಿನಲ್ಲಿ ಭಕ್ತರು ಬೀಡು ಬಿಟ್ಟಿರುವುದು ಕಂಡುಬಂದಿತು. ಪಟ್ಟಣದ ದೇವಸ್ಥಾನಗಳ ಆವರಣ, ಮುಖ್ಯರಸ್ತೆಗಳು ಹಾಗೂ ರಥ ಬೀದಿಯಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸಾಗಿಸಲು ಸ್ಥಳೀಯ ಆಡಳಿತದ ಜೊತೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದರಿಂದ ಸ್ವಚ್ಚತೆಯ ವಾತಾವರಣ ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.