ಕೂಡ್ಲಿಗಿ: ವಿದ್ಯಾರ್ಥಿ ವೇತನ ಮಂಜೂರಾತಿ, ಡಿ.ಎಡ್ ಶಿಕ್ಷಕರ ನೇಮಕಾತಿ ಮತ್ತು ವಿದ್ಯಾರ್ಥಿ ನಿಲಯ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಡಿ.ಎಡ್ ಪದವಿಧರರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್. ವೀರಣ್ಣ, ‘ಕಳೆದ 5 ವರ್ಷಗಳಿಂದಲೂ ವಿದ್ಯಾರ್ಥಿ ವೇತನ ನೀಡದೆ ಸರ್ಕಾರ ಕಡೆಗಣಿಸಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷರಕ ಕೊರತೆ ಇದ್ದರೂ ಸರ್ಕಾರ ಶಿಕ್ಷರರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ. ಇದರಿಂದ ಶಿಕ್ಷಕರ ತರಬೇತಿ ಪಡೆದ ಲಕ್ಷಾಂತರ ಪದವಿಧರರು ನಿರುದ್ಯೋಗಿಗಳಾಗಿದ್ದಾರೆ’ ಎಂದರು.
‘ಗ್ರಾಮೀಣ ಭಾಗದಲ್ಲಿ ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸೂಕ್ತ ವಸತಿ ನಿಲಯಗಳಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗಹರಿಸಲು ಮುಂದಾಗಬೇಕು’ ಎಂದು ಅಗ್ರಹಿಸಿದರು.
ಶಿರಸ್ತೇದಾರ್ ಎಚ್. ಚಂದ್ರಶೇಖರ್ ಮನವಿ ಸ್ವೀಕರಿಸಿದರು. ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ನಿಂಗರಾಜು, ಪ್ರಧಾನ ಕಾರ್ಯದರ್ಶಿ ಗುರುಸಿದ್ದನಗೌಡ, ಕೆ. ಪಾಪರಾಜು, ಅರುಣ ಕುಮಾರ್, ಚಿತ್ತರಂಜನ್, ಶಿಲ್ಪ, ಪೂಜಾ, ಪ್ರಿಯಾಂಕಾ, ಸುಪ್ರೀತಾ, ಅನುಷಾ, ಭುವನೇಶ್ವರಿ, ಲತಾ, ಇಂದ್ರಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.