ಬಳ್ಳಾರಿ: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಜಮೀನು ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರಕ್ಕೆ ಹಿಂಪಡೆಯುತ್ತಲೇ ಜಿಲ್ಲೆಯಲ್ಲಿ ರೈತರು ಸಂಭ್ರಮಾಚರಣೆ ನಡೆಸಿದರು.
ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದಿಂದ ಮೆರವಣಿಗೆ ಮೂಲಕ ದುರ್ಗಮ್ಮ ದೇವಾಸ್ಥಾನ ಹತ್ತಿರ ಸೇರಿ ವಿಜಯೋತ್ಸವ ಆಚರಿಸಲಾಯಿತು.
‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ 13 ಹಳ್ಳಿಗಳ ಗ್ರಾಮದ ರೈತರ ಭೂಮಿಯ ಸ್ವಾಧೀನದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂಪಡೆದಿದ್ದಾರೆ. ಇದು ರೈತರ ಸುದೀರ್ಘ ಹೋರಾಟಕ್ಕೆ ಸಂದ ಜಯ’ ಎಂದು ಸಂಯುಕ್ತ ಹೋರಾಟ ಕರ್ನಾಟಕದ ನಾಯಕರು ಹೇಳಿದರು.
ಜೀವನೋಪಾಯಕ್ಕಾಗಿ ಇರುವ ರೈತರ ಭೂಮಿಯನ್ನು ಉಳಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆಯೆಯೇ ಹೊರತು ಬಂಡವಾಳ, ಕಾರ್ಫೋರೇಟ್ ಕಂಪನಿಗಳಿಗೆ ಮಣೆ ಹಾಕಬಾರದು ಎಂದು ಸರ್ಕಾರವನ್ನು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ರಾಜ್ಯ ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು, ಎಐಕೆಕೆಎಂಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ, ಕೆಪಿಆರ್ಎಸ್ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಿವಶಂಕರ ಇದ್ದರು.
‘ಪರಿಹಾರ ನೀಡಿ’
ಚನ್ನರಾಯಪಟ್ಟಣದಲ್ಲಿ ಹೋರಾಟದಲ್ಲಿ ನಿರತರಾಗಿದ್ದ ರೈತರ ಮೇಲೆ ಹಾಕಿರುವ ಎಲ್ಲಾ ಸುಳ್ಳು ಕೇಸುಗಳನ್ನು ವಾಪಸ್ ಪಡೆಯಬೇಕು ಈ ಹೋರಾಟದಲ್ಲಿರುವಾಗಲೇ ಅಪಘಾತದಿಂದ ಮೃತಪಟ್ಟ ಚನ್ನರಾಯಪಟ್ಟಣ ಹೋಬಳಿಯ ಅಂಜನಪ್ಪ ಹಾಗೂ ಹೃದಯಾಘಾತದಿಂದ ಕೊನೆಯುಸಿರೆಳೆದ ಗುಂಡ್ಲುಪೇಟೆ ತಾಲ್ಲೂಕಿನ ಈಶ್ವರಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಬೇಕು ಎಂದು ರಾಜ್ಯ ಪ್ರಾಂತ ರೈತ ಸಂಘದ ನಾಯಕ ಯು. ಬಸವರಾಜು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.