ಹೊಸಪೇಟೆ: ವಕೀಲ ರಾಜ ಮೊಹಮ್ಮದ್ ಎನ್. ಬಡಿಗೇರ್ ಅವರ ಕೆಲಸಕ್ಕೆ ಅಡ್ಡಿಪಡಿಸಿ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಕಂಪ್ಲಿ ಸಬ್ ಇನ್ಸ್ಪೆಕ್ಟರ್ ಮೌನೇಶ್ ರಾಥೋಡ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲಾಪ ಬಹಿಷ್ಕರಿಸಿದ ವಕೀಲರುನ್ಯಾಯಾಲಯದ ಆವರಣದಿಂದ ರೋಟರಿ ವೃತ್ತದವರೆಗೆ ರ್ಯಾಲಿ ನಡೆಸಿದರು. ನಂತರ ತಹಶೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
‘ತಾಲ್ಲೂಕು ಕಾನೂನು ಸೇವಾ ಸಮಿತಿಯವರು ಒಪ್ಪಿಸಿದ ಕೆಲಸ ನಿರ್ವಹಿಸಲು ಬಡಿಗೇರ್ ಅವರು ಅ. 31ರಂದು ಬೆಳಿಗ್ಗೆ 11.30ರ ಸುಮಾರಿಗೆ ಕಂಪ್ಲಿ ಪುರಸಭೆಯೊಳಗೆ ಹೋಗುವಾಗ ಅವರನ್ನು ಇನ್ಸ್ಪೆಕ್ಟರ್ ಗೇಟಿನ ಬಳಿ ತಡೆದಿದ್ದಾರೆ. ಸೂಕ್ತ ಕಾರಣ, ಅದರ ಪತ್ರ ತೋರಿಸಿದರೂ ಇನ್ಸ್ಪೆಕ್ಟರ್ ಕಿವಿಗೆ ಹಾಕಿಕೊಂಡಿಲ್ಲ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೆಲಸಕ್ಕೆ ಅಡ್ಡಿಪಡಿಸಿ, ನಿಂದಿಸಿರುವುದು ಖಂಡನಾರ್ಹ. ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷ ಕಲ್ಲಂ ಭಟ್ಟ, ಪ್ರಧಾನ ಕಾರ್ಯದರ್ಶಿ ಕೋಟ್ರಗೌಡ, ವಕೀಲರಾದ ನೀಲಕಂಠ ಸ್ವಾಮಿ, ರಫೀಯಾ ಜಬೀನಾ, ಜಿ. ವೀರಭದ್ರಪ್ಪ, ಕೆ.ಪ್ರಹ್ಲಾದ್, ಎಸ್.ಜವಳಿ, ತಾರಿಹಳ್ಳಿ ವೆಂಕಟೇಶ್, ಗುಜ್ಜಲ ನಾಗರಾಜ್, ಎ. ಕರುಣಾನಿಧಿ, ಫುಷ್ಪಲತಾ, ಯರಡೋಣಿ ಯರ್ರಿಸ್ವಾಮಿ, ಸತ್ಯನಾರಾಯಣ, ಶ್ರೀಪತಿ, ಜಿ.ರಾಫವೇಂದ್ರ, ಶ್ರೀನಿವಾಸ ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.