
ಹಗರಿಬೊಮ್ಮನಹಳ್ಳಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಆರು ಜೋಡಿ ದಂಪತಿ ಅಂತಿಮವಾಗಿ ರಾಜೀಸಂಧಾನದಲ್ಲಿ ಮತ್ತೆ ಒಂದಾದರು. ಈ ಬಾರಿ 550 ಪ್ರಕರಣಗಳು ಇತ್ಯರ್ಥಗೊಂಡಿದ್ದು ವಿಶೇಷವಾಗಿತ್ತು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕಾನೂನು ಸೇವೆಗಳ ಸಮಿತಿಯಿಂದ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ.ಮಧುಸೂಧನ ಅವರ ನ್ಯಾಯಾಲಯದಲ್ಲಿ 1141 ಪ್ರಕರಣಗಳ ಪೈಕಿ 90 ಪ್ರಕರಣಗಳನ್ನು ಇತ್ಯರ್ಥ ಮಾಡಿ ₹3.58 ಕೋಟಿ ರೂಪಾಯಿ ಪರಿಹಾರ ಒದಗಿಸಲಾಯಿತು.
ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದಿನ್ ಅವರ ನ್ಯಾಯಾಲಯದಲ್ಲಿ 1523 ಪ್ರಕರಣಗಳನ್ನು ಗುರುತಿಸಿ 460 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ₹46.92ಲಕ್ಷ ಮೊತ್ತದ ಪರಿಹಾರ ಒದಗಿಸಲಾಯಿತು. ಜತೆಗೆ 1229 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಮಾಡಿ ₹41.62ಲಕ್ಷ ಮೊತ್ತದ ಪರಿಹಾರ ನೀಡಲಾಯಿತು.
ಚೆಕ್ ಬೌನ್ಸ್ ಪ್ರಕರಣಗಳು, ಪಾಲುವಿಭಾಗ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಕ್ಷಿದಾರರು ಮತ್ತು ವಕೀಲರ ರಾಜೀಸಂಧಾನದ ಮೂಲಕ ಮುಕ್ತಾಯಗೊಳಿಸಲಾಯಿತು.
ವಕೀಲರ ಸಂಘದ ಹಿರಿಯ ಸದಸ್ಯ ಟಿ.ಜಿ.ಎಂ.ಕೊಟ್ರೇಶ್, ಅಡ್ವೊಕೇಟ್ ಕೌನ್ಸಿಲರ್ ಎ.ಚಂದ್ರಶೇಖರ್, ಶೇಕ್ ಅಹ್ಮದ್, ನ್ಯಾಯಾಲಯದ ರಾಜಶೇಖರಗೌಡ, ನಿಂಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.