
ತೆಕ್ಕಲಕೋಟೆ: ‘ಇಲ್ಲಿನ ಉತ್ಖನನ ನೆಲೆಗಳಲ್ಲಿ ದೊರೆತ ಆಯುಧಗಳು ಸೂಕ್ಷ್ಮ ಶಿಲಾಯುಗದ ಅವಶೇಷಗಳಾಗಿದ್ದು ಕುತೂಹಲ ಮೂಡಿಸುವಂತಿವೆ’ ಎಂದು ಉತ್ಖನನ ಕಾರ್ಯದ ನಿರ್ದೇಶಕ ಹಾಗೂ ಹಂಪಿ, ಕಮಲಾಪುರದ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಆರ್. ಶೇಜೇಶ್ವರ ಹೇಳಿದರು.
ಪಟ್ಟಣದ ನೈರುತ್ಯ ಭಾಗದ ಗೌಡ್ರಮೂಲೆಯ ಉತ್ಖನನ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
‘ಇಲ್ಲಿನ ಕಲ್ಲಾಸರೆ, ವರ್ಣ ಚಿತ್ರಗಳು, ಗೀರುಚಿತ್ರ, ಕುಟ್ಟುಚಿತ್ರ, ಹಾಗೂ ಈಗ ದೊರೆತ ಮಾನವನ ನೆಲೆಯಲ್ಲಿ ಆಯುಧಗಳ ಬಳಕೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಾಧಾರಗಳನ್ನು ದೊರಕಿಸಿದಂತಾಗಿದೆ’ ಎಂದರು.
ಮಾನವನ ಪಳುವಳಿಕೆ ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು, ‘ಇಲ್ಲಿ ಮಾನವನ ಶರೀರದ ಅಸ್ಥಿಪಂಜರ ದೊರೆತಿದ್ದು, ಇದನ್ನು ಕಾರ್ಬನ್ ಡೇಟಿಂಗ್ಗೆ ಕಳುಹಿಸಿ ನಿಖರ ಮಾಹಿತಿ ಪಡೆಯಲಾಗುವುದು ಹಾಗೂ ಇದನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಪುರಾತತ್ವ ಅಧ್ಯಯನ ವಿಭಾಗ ಪ್ರಾಧ್ಯಾಪಕ ಸೋಮಶೇಖರ ಮಾತನಾಡಿ, ‘ತೆಕ್ಕಲಕೋಟೆಯು ಕರ್ನಾಟಕದ ಇತಿಹಾಸದಲ್ಲಿ ಪ್ರಾಗೈತಿಹಾಸಿಕ ಕಾಲದ ಬಹುದೊಡ್ಡ ನೆಲೆಯಾಗಿದೆ. ಈಗಿನ ಉತ್ಖನನದಲ್ಲಿ ಸೂಕ್ಷ್ಮ ಶಿಲಾಯುಗದ ಮಹತ್ವದ ಅವಶೇಷಗಳು ದೊರೆತಿರುವುದು ವಿಶೇಷ’ ಎಂದು ಹೇಳಿದರು.
ಅಮೆರಿಕದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್ ಸುಗಂಧಿ, ‘ಇದು ಅಧ್ಯಯನಾಸಕ್ತರ ಗಣಿಯಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.