ADVERTISEMENT

ಡಿಎಂಎಫ್‌ ನಿಧಿ: ಸಚಿವ ಆನಂದ್‌ ಸಿಂಗ್‌- ಶಾಸಕ ತುಕಾರಾಂ ಏಕವಚನದಲ್ಲಿ ಕಿತ್ತಾಟ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
ಶಾಸಕ ತುಕಾರಾಂ(ಎಡ), ಸಚಿವ ಆನಂದ್ ಸಿಂಗ್(ಬಲ)
ಶಾಸಕ ತುಕಾರಾಂ(ಎಡ), ಸಚಿವ ಆನಂದ್ ಸಿಂಗ್(ಬಲ)   

ಬಳ್ಳಾರಿ: ಜಿಲ್ಲಾ ಖನಿಜ ನಿಧಿ (ಡಿಎಂಎಫ್‌) ಹಂಚಿಕೆ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹಾಗೂ ಸಂಡೂರು ಕ್ಷೇತ್ರದ ಶಾಸಕ ತುಕಾರಾಂ ಏಕ ವಚನದಲ್ಲಿ ಕಿತ್ತಾಡಿಕೊಂಡು, ಶಾಸಕರು ಸಭೆಯಿಂದ ಹೊರನಡೆದ ಪ್ರಸಂಗ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಅಧಿಕಾರಿಗಳೆದುರೇ ಆನಂದ್‌ಸಿಂಗ್‌ ಮತ್ತು ತುಕಾರಾಂ ಸುಮಾರು ಅರ್ಧಗಂಟೆ ಕಿತ್ತಾಡಿದರು. ವಿಧಾನಪರಿಷತ್‌ ಸದಸ್ಯರಾದ ಕೆ.ಸಿ.ಕೊಂಡಯ್ಯ ಮತ್ತು ಅಲ್ಲಂ ವೀರಭದ್ರಪ್ಪ ಅವರು, ಇಬ್ಬರನ್ನೂ ಸಮಾಧಾನಪಡಿಸಲು ನಡೆಸಿದ ಪ್ರಯತ್ನ ಫಲಿಸಲಿಲ್ಲ.

ತಮ್ಮ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಕೋರ್ಟ್‌ ಮೊರೆ ಹೋಗುವುದಾಗಿ ಕೂಗಾಡುತ್ತಾ ತುಕಾರಾಂ ಸಭೆಯಿಂದ ಹೊರನಡೆದರು. ಆನಂದ್‌ಸಿಂಗ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಸಭೆ ಸೇರಿತ್ತು.

ADVERTISEMENT

ಜಿಲ್ಲಾ ಖನಿಜ ನಿಧಿ ಅನುದಾನದಡಿ ನಡೆಯುತ್ತಿರುವ, ನಡೆಯಲಿರುವ ಕಾಮಗಾರಿಗಳ ಪ್ರಗತಿ ಕುರಿತು ಚರ್ಚೆ ಆಗುತ್ತಿತ್ತು. ಆ ಸಮಯದಲ್ಲಿ ತುಕಾರಾಂ, ‘ಗಣಿಗಾರಿಕೆಯಿಂದ ಹೆಚ್ಚು ಬಾಧಿತವಾಗಿರುವ ಸಂಡೂರಿಗೆ ಡಿಎಂಎಫ್‌ ಮಾರ್ಗಸೂಚಿಯಂತೆ ಶೇ 60ರಷ್ಟು ಅನುದಾನ ಹಂಚಿಕೆ ಮಾಡದೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಕ್ರಿಯಾ ಯೋಜನೆ ಸಿದ್ಧವಾಗಿದ್ದು ನಿಮ್ಮ (ಕಾಂಗ್ರೆಸ್‌) ಸರ್ಕಾರದಲ್ಲೇ. ಡಿ.ಕೆ.ಶಿವಕುಮಾರ್‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ. ಆಗ ಕಣ್ಣು ಮುಚ್ಚಿ ಕುಳಿತುಕೊಂಡು, ಈಗ ಕ್ಯಾತೆ ತೆಗೆಯುವುದು ಸರಿಯಲ್ಲ’ ಎಂದು ಆನಂದ್‌ ಸಿಂಗ್‌ ಕೂಗಾಡಿದರು.

‘ಅನುದಾನ ಹಂಚಿಕೆಯಲ್ಲಿ ರಾಜಕಾರಣ ನಡೆಯುತ್ತಿದೆ’ ಎಂದು ತುಕಾರಾಂ ಆರೋಪಿಸಿದರು. ಈ ಹಂತದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಹೋಗಿ
ಕೊನೆಗೆ ಶಾಸಕರು ಸಭೆಯಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.