ADVERTISEMENT

ಹವಾಮಾನ ವೈಪರೀತ್ಯ: ಒಣಗುತ್ತಿರುವ ಮೆಣಸಿನಕಾಯಿ ಸಸಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 15:23 IST
Last Updated 30 ಜೂನ್ 2023, 15:23 IST
ಕಂಪ್ಲಿಯ ಸಣಾಪುರ ರಸ್ತೆ ಬಳಿ ವೈಕುಂಟಂ ಸೂರ್ಯನಾರಾಯಣ ಅವರು ಮೂರನೇ ಬಾರಿ ಮೆಣಸಿನಕಾಯಿ ನಾಟಿ ಮಾಡಿಸಿದರು
ಕಂಪ್ಲಿಯ ಸಣಾಪುರ ರಸ್ತೆ ಬಳಿ ವೈಕುಂಟಂ ಸೂರ್ಯನಾರಾಯಣ ಅವರು ಮೂರನೇ ಬಾರಿ ಮೆಣಸಿನಕಾಯಿ ನಾಟಿ ಮಾಡಿಸಿದರು   

ಕಂಪ್ಲಿ: ಹವಾಮಾನ ವೈಪರೀತ್ಯದಿಂದಾಗಿ ನಾಟಿ ಮಾಡಿದ ಮೆಣಸಿನಕಾಯಿ ಸಸಿ ಆರಂಭದಲ್ಲಿಯೇ ಒಣಗುತ್ತಿರುವುದರಿಂದ ರೈತರು ಕಂಗಲಾಗಿದ್ದಾರೆ.

ಪಟ್ಟಣದ ಸಣಾಪುರ ರಸ್ತೆ ಬಳಿ ವೈಕುಂಟಂ ಸೂರ್ಯನಾರಾಯಣ ಎಂಬ ರೈತ ಒಂದು ಎಕರೆ ಗುತ್ತಿಗೆ ಪಡೆದಿದ್ದು, ಕೊಳವೆಬಾವಿ ಆಧರಿಸಿ ಮೆಣಸಿನಕಾಯಿ ಕೃಷಿ ಆರಂಭಿಸಿದ್ದಾರೆ.

‘ಜೂನ್ 5ರಂದು 5531 ತಳಿಯ ಮೆಣಸಿನಕಾಯಿ ಸಸಿಯನ್ನು ₹25 ಸಾವಿರ ವೆಚ್ಚ ಮಾಡಿ ನಾಟಿ ಮಾಡಿದ್ದಾರೆ. ಸಕಾಲಕ್ಕೆ ಮಳೆ ಇಲ್ಲದೆ, ಬಿಸಿಲ ಝಳಕ್ಕೆ ಬಹಳಷ್ಟು ಸಸಿ ಒಣಗಿವೆ. ಜೂನ್ 15ರಂದು ಮತ್ತೆ ₹6,000 ನೀಡಿ ಸಸಿ ತಂದು ಒಣಗಿದ ಸ್ಥಳದಲ್ಲಿ ಸಸಿ ನಾಟಿ ಮಾಡಿದ್ದಾರೆ. ಇದಾದ ನಂತರವೂ ಸಸಿಗಳು ಅಲ್ಲಲ್ಲಿ ಬಾಡಿ ಒಣಗಿವೆ. ಅದರಿಂದ ಕಂಗಾಲಾಗದ ರೈತ ₹4,000 ವೆಚ್ಚ ಮಾಡಿ ಸಸಿ ತಂದು ಮೂರನೇ ಬಾರಿಯೂ ನಾಟಿ ಮಾಡಿದ್ದೇನೆ’ ಎಂದು ರೈತ ಸೂರ್ಯನಾರಾಯಣ ವಿವರಿಸಿದರು.

ADVERTISEMENT

ಹವಾಮಾನ ವೈಪರೀತ್ಯದಿಂದ ಮೆಣಸಿನಕಾಯಿ ಸಸಿ ಒಣಗುತ್ತಿದ್ದರೆ ಇದು ಮೇಲ್ನೋಟಕ್ಕೆ ಸೊರಗು ರೋಗವಿರಬಹುದು. ರೈತರು ಹೊಲದಲ್ಲಿ ಬೆಳೆ ಪರಿವರ್ತನೆ ಮಾಡಬೇಕು. ಇಲ್ಲವಾದಲ್ಲಿ ಹೊಲದ ಸರಹದ್ದಿನಲ್ಲಿ ಅಥವಾ ಮೆಣಸಿನಕಾಯಿ 10 ಸಾಲಿನ ನಂತರ ಅಂತರ ಬೆಳೆಯಾಗಿ ಸಜ್ಜೆ, ಜೋಳ, ಮೆಕ್ಕೆಜೋಳ, ಚೆಂಡೂ ಹೂ ಬೆಳೆದಲ್ಲಿ ರೋಗ ನಿಯಂತ್ರಣ ಸಾಧ್ಯ. ರೈತರೇ ಮೆಣಸಿನಕಾಯಿ ಬೀಜ ತಂದು ಬೀಜೋಪಚಾರ ಮಾಡಿ ಸಸಿ ಬೆಳೆಸಿದಲ್ಲಿ ಹೆಚ್ಚಿನ ಅನುಕೂಲ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.