ಬಳ್ಳಾರಿ: ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ಬಳ್ಳಾರಿ ಜಿಲ್ಲೆಗೆ ಇರುವ ವರ. ಆದರೆ, ವರದ ಫಲವನ್ನು ಸಮರ್ಪಕವಾಗಿ ಪಡೆಯಲು ಬಳ್ಳಾರಿಗೆ ಸಾಧ್ಯವಾಗುತ್ತಿಲ್ಲ. ಮೂರು ವರ್ಷಗಳಿಂದ ಡಿಎಂಫ್ಗೆ ಕ್ರಿಯಾಯೋಜನೆಯೇ ಆಗಿಲ್ಲ.
ಮೂರು ವರ್ಷಗಳ ಹಿಂದೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಿದ ಕಾಮಗಾರಿಗಳೇ ಅನುಷ್ಠಾನಗೊಳ್ಳುತ್ತಿವೆ ಹೊರತು ಹೊಸ ಯೋಜನೆಗಳು ರೂಪುಗೊಂಡಿಲ್ಲ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಒಂದು ಕಾರಣವಾದರೆ, ಜಿಲ್ಲೆಯ ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತೊಂದು ಕಾರಣ ಎಂಬ ದೂರುಗಳು ಕೇಳಿಬಂದಿವೆ.
2020ರ ಸೆ. 29ರಂದು, ಅಂದರೆ, ಇಲ್ಲಿಂದ ಐದು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲಾ ಡಿಎಂಎಫ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆದಿತ್ತು. ಮುಂದಿನ ಮೂರು ವರ್ಷಗಳಿಗೆ (2020-21, 2021-22 ಮತ್ತು 2022-23ನೇ) ಒಟ್ಟು ₹515.22 ಕೋಟಿ ವೆಚ್ಚದ 189 ಯೋಜನೆಗಳಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಯಮ (2016)ಗಳ ಅಡಿಯಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು.
2020ರ ಸಭೆಯಲ್ಲಿ ಅನುಮೋದನೆಗೊಂಡ ಯೋಜನೆಗಳಿಗೆ ಬದಲಾವಣೆ ತರಲು 2022ರ ನ.7ರಂದು ನಡೆದ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಯಿತು. ಆ ಸಭೆಯೇ ಕೊನೆ, ಡಿಎಂಎಫ್ನ ಗವರ್ನಿಂಗ್ ಕೌನ್ಸಿಲ್ ಸಭೆ ಈವರಗೆ ನಡೆದಿಲ್ಲ. ಹೊಸ ಕ್ರಿಯಾ ಯೋಜನೆಗಳೂ ಜಾರಿಯಾಗಿಲ್ಲ.
ರಾಜ್ಯದ ಎಲ್ಲ ಜಿಲ್ಲೆಗಳ ಡಿಎಂಎಫ್ನಲ್ಲಿ ಈವರೆಗೆ ₹4828.34 ಕೋಟಿ ಹಣ ಸಂಗ್ರಹವಾಗಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯೊಂದರಲ್ಲೇ ₹2623.82 ಕೋಟಿ ಸಂಗ್ರಹಗೊಂಡಿದೆ. ಇದು ಬಳ್ಳಾರಿ ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳಿಗೆ ಮಾತ್ರವೇ ಸೀಮಿತವಾದ ಧನ. ಇದರಲ್ಲಿ ಒಂದಷ್ಟು ಹಣ ಹಿಂದಿನ ಯೋಜನೆಗಳಿಗೆ ಬಳಕೆಯಾಗಿದೆ.
ಕ್ರಿಯಾಯೋಜನೆಗೆ ಅಡ್ಡಿಯೇನು?: 2024ರ ಜನವರಿಯಲ್ಲಿ ಕೇಂದ್ರ ಗಣಿ ಇಲಾಖೆಯಿಂದ ಆದೇಶವೊಂದು ರಾಜ್ಯಗಳಿಗೆ ಬಂದಿದೆ. ಡಿಎಂಎಫ್ಗೆ ಜಿಲ್ಲಾ ಉಸ್ತುವಾರಿ ಸಚಿವರೇ ಮುಖ್ಯಸ್ಥರಾಗಿರಬೇಕು ಎಂಬುದನ್ನು ಬದಲಾಯಿಸಿ ಜಿಲ್ಲಾಧಿಕಾರಿಯನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಈಗಿನ ಮಾರ್ಗಸೂಚಿಗಳ ಪ್ರಕಾರ ಗಣಿ ಪ್ರದೇಶದಿಂದ ಗರಿಷ್ಠ 25 ಕಿ.ಮೀ ವರೆಗೆ ಮಾತ್ರ ಅನುದಾನ ಬಳಕೆ ಮಾಡಬೇಕು ಎಂದು ಹೇಳಲಾಗಿದೆ. ಈ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಒಪ್ಪಬಹುದು ಅಥವಾ ಕೆಲವು ಬದಲಾವಣೆಗಳನ್ನು ತಂದು ಕೇಂದ್ರಕ್ಕೆ ಶಿಫಾರಸು ಮಾಡಬಹುದು. ಆದರೆ, ಸರ್ಕಾರ ಕೇಂದ್ರದ ಈ ಮಾರ್ಗಸೂಚಿಗಳ ಸಂಬಂಧ ಈ ವರೆಗೆ ಯಾವುದೇ ನಿರ್ಧಾರವನ್ನೇ ಮಾಡಿಲ್ಲ.
ಇನ್ನೊಂದೆಡೆ, ಜಿಲ್ಲಾಧಿಕಾರಿಯನ್ನು ಡಿಎಂಎಫ್ ಮುಖ್ಯಸ್ಥರನ್ನಾಗಿ ಮಾಡುವುದಕ್ಕೆ ಮತ್ತು ಅನುದಾನ ಬಳಕೆಗೆ ವಿಧಿಸಲಾಗಿರುವ ನಿಯಮಗಳ ಬಗ್ಗೆ ರಾಜಕೀಯ ವಲಯದ ವಿರೋಧವಿದೆ ಎಂದು ಹೇಳಲಾಗುತ್ತಿದೆ. ಡಿಎಂಎಫ್ ನಮ್ಮ ಕೈಯಲ್ಲೇ ಇರಬೇಕು. ಹಣವನ್ನು ಎಲ್ಲ ತಾಲೂಕುಗಳಿಗೂ ಸಮಾನವಾಗಿ ಹಂಚಿಕೊಳ್ಳಬೇಕು ಎಂಬುದು ರಾಜಕೀಯ ವಲಯದ ನಿಲುವು ಹೀಗಾಗಿಯೇ ಈ ವಿಷಯ ನನೆಗುದಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಡಿಎಂಎಫ್ಗೆ ಕ್ರಿಯಾಯೋಜನೆ ಮಾಡಿ ಮೂರು ವರ್ಷಗಳಾಗಿವೆ ಎಂಬುದು ಗೊತ್ತಾಗಿದೆ. ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದುಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವ
ಪಿ.ಕೆ. ಮಿಶ್ರಾ ಜಿಲ್ಲಾಧಿಕಾರಿ!
ಬಳ್ಳಾರಿ ಜಿಲ್ಲೆಗೆ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಜಿಲ್ಲಾಧಿಕಾರಿ. ಹೀಗೆಂದು ಹೇಳುತ್ತಿದೆ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನ ಅಧಿಕೃತ ವೆಬ್ಸೈಟ್! ಪ್ರಶಾಂತ್ ಕುಮಾರ್ ಮಿಶ್ರಾ ಬಳ್ಳಾರಿಯಿಂದ ವರ್ಗಾವಣೆಯಾಗಿ ತಿಂಗಳಾಗುತ್ತಾ ಬಂದಿದೆ. ಆದರೂ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡುವ ಕೆಲಸಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇನ್ನೂ ಕೈಹಾಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.