
ಕುರುಗೋಡು: ತಾಲ್ಲೂಕಿನ ಕಲ್ಲುಕಂಭ ಗ್ರಾಮದ ಜನರು ಕೋತಿಗಳ ಉಪಟಳ ದಿಂದ ಬೇಸತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಜನರ ಮೇಲೆ ಕೋತಿಗಳ ಹಿಂಡು ಏಕಾಏಕಿ ದಾಳಿಮಾಡಿ ಗಾಯಗೊಳಿಸುತ್ತಿವೆ. ಗ್ರಾಮದಲ್ಲಿ ಹಲವು ದಿನಗಳಿಂದ ಕೋತಿಯ ಹಿಂಡು ಬೀಡು ಬಿಟ್ಟಿದೆ. ನಿತ್ಯ ಅಂಗಡಿ ಮುಂಗಟ್ಟು, ಶಾಲೆ, ಮನೆಗಳಿಗೆ ನುಗ್ಗಿ ದಾಂದಲೆ ಮಾಡುತ್ತಿವೆ.
ಬಸ್ಗಳಿಗಾಗಿ ಕಾಯುವ ಪ್ರಯಾಣಿಕರಿಗೂ ಬೆನ್ನತ್ತಿ ಭಯಗೊಳಿಸುತ್ತಿವೆ. ಕರ್ನಾಟಕ ಪಬ್ಲಿಕ್ ಶಾಲೆಗೆ ನುಗ್ಗಿದ ಕೋತಿ ಸಾಮಾಗ್ರಿ ಹಾಳು ಮಾಡುವ ಜತೆಗೆ ಒಬ್ಬ ಶಿಕ್ಷಕ, ಮಕ್ಕಳು ಸೇರಿ ನಾಲ್ವರಿಗೆ ಕಚ್ಚಿ ಗಾಯಗೊಳಿದ ಘಟನೆ ಶನಿವಾರ ಜರುಗಿದೆ. ಕೋತಿಗಳ ಉಪಟಳ ನಿಯಂತ್ರಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಜನರು ಬೇಸರಗೊಂಡಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ದೂರು ನೀಡಿದರೆ ’ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿ ವಾಹನ ವ್ಯವಸ್ಥೆ ಕಲ್ಪಿಸಿದರೆ ಬೋನ್ ನೀಡಲಾಗುವುದು. ಜತೆಗೆ ಕೋತಿ ಹಿಡಿಯುವ ಖಾಸಗಿ ವ್ಯಕ್ತಿ ಕರೆಯಿಸಿ ಸೆರೆ ಹಿಡಿಸುವಂತೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನಾಗರಾಜ ಅಸಮಾಧಾನ ವ್ಯಕ್ತಪಡಿಸಿದರು.
ಕೋತಿ ಉಪಟಳದಿಂದ ಹೆಚ್ಚಿಗೆ ಸಂಭವಿಸುವ ಅನಾಹುತ ತಪ್ಪಿಸದಿದ್ದರೆ ಹೋರಾಟದ ಹಾದಿ ತಿಳಿಯಬೇಕಾಗುತ್ತದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಎನ್ ಎರಿಸ್ವಾಮಿ, ದೊಡ್ಡಪ್ಪ, ನಾಗರಾಜ್ ಮತ್ತು ಭೀಮೇಶ ಎಚ್ಚರಿಸಿದ್ದಾರೆ.
ಕೋತಿ ದಾಳಿನಡೆಸುತ್ತಿರುವ ಘಟನೆಗಳ ಬಗ್ಗೆ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲಿ ಬೋನು ಅಳವಡಿಸಲಾಗುವುದು.ಅನೀಲ್ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.