ADVERTISEMENT

ತೆಕ್ಕಲಕೋಟೆ | ಭತ್ತದ ನಾಟಿ ಚುರುಕು; ಸಸಿಗೆ ಹೆಚ್ಚಿನ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 3:12 IST
Last Updated 23 ಜುಲೈ 2025, 3:12 IST
ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಹಳೇಕೋಟೆ ಮಾರೆಮ್ಮ ದೇವಸ್ಥಾನದ ಹೊಲಗಳಲ್ಲಿ ಮಹಿಳೆಯರು ಭತ್ತದ ಸಸಿ ಕೀಳುತ್ತಿರುವುದು
ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಹಳೇಕೋಟೆ ಮಾರೆಮ್ಮ ದೇವಸ್ಥಾನದ ಹೊಲಗಳಲ್ಲಿ ಮಹಿಳೆಯರು ಭತ್ತದ ಸಸಿ ಕೀಳುತ್ತಿರುವುದು   

ತೆಕ್ಕಲಕೋಟೆ: ಈ ಬಾರಿಯ ಮುಂಗಾರು ರೈತರಿಗೆ ಆಶಾದಾಯಕವಾಗಿದ್ದು, ಎರಡನೇ ಬೆಳೆಗೆ ನೀರು ಒದಗಿಸುವ ಭರವಸೆ ಮೂಡಿದೆ. ಜತೆಗೆ ತುಂಗಭದ್ರಾ ಜಲಾಶಯ ತುಂಬಿ ನಾಲೆಗೆ ನೀರು ಬಿಟ್ಟಿದ್ದು ರೈತರ ಉತ್ಸಾಹ ಇಮ್ಮಡಿಗೊಳಿಸಿದೆ.

ಪಂಪ್‌ಸೆಟ್ ಹಾಗೂ ಮಳೆಗೆ ಸಸಿಮಡಿ ಹಾಕಿ ಭೂಮಿ ಸಿದ್ದಪಡಿಸಿಕೊಂಡಿದ್ದ ನದಿಪಾತ್ರದ ಎಂ.ಸೂಗೂರು, ಮಣ್ಣೂರು, ನಡವಿ, ರುದ್ರಪಾದ, ನಿಟ್ಟೂರು, ಉಡೇಗೋಳ, ಕೆಂಚನಗುಡ್ಡ ಗ್ರಾಮಗಳಲ್ಲಿ ಭತ್ತದ ನಾಟಿ ಕಾರ್ಯ ಮುಕ್ತಾಯ ಹಂತದಲ್ಲಿದೆ. ಅಲ್ಲದೆ ತೆಕ್ಕಲಕೋಟೆ, ಹಳೇಕೋಟೆ ಉಪ್ಪಾರ ಹೊಸಹಳ್ಳಿ, ಬಲಕುಂದಿ, ಭೈರಾಪುರ, ಕರೂರು ಭಾಗಗಳಲ್ಲಿ ನಾಟಿ ಕಾರ್ಯ ಚುರುಕುಗೊಂಡಿದೆ.

ಸಸಿಗೆ ಹೆಚ್ಚಿದ ಬೇಡಿಕೆ: ತಿಂಗಳ ಹಿಂದೆಯೇ ಪಂಪ್‌ಸೆಟ್ ಮೂಲಕ ಸಸಿಮಡಿ ಹಾಕಿ ಸಸಿ ಬೆಳೆಸಿದ್ದ ರೈತರಿಗೆ ಕಾಲುವೆಗೆ ನೀರು ಬಂದಿರುವ ಹಿನ್ನಲೆಯಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಒಂದು ಸೆಂಟ್ಸ್ ಸಸಿಗೆ ₹1500 ಇದ್ದು ಎಕರೆಗೆ 2 ಸೆಂಟ್ಸ್ ಬೇಕಾಗುತ್ತದೆ. ಸಸಿ ನಾಟಿ ಹಾಗೂ ಬಾಜು ಮಾಡಲು ₹3200 ಕೂಲಿ ನಡೆಯುತ್ತಿದೆ. ಈಗಾಗಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತದ ನಾಟಿ ಕಾರ್ಯ ಮುಗಿದಿದ್ದು ಉಳಿದ ರೈತರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

ಕಾಲುವೆಗೆ ನೀರು: ಈ ಬಾರಿ ತಾಲ್ಲೂಕಿನಾದ್ಯಂತ ಜನವರಿಯಿಂದ ಜುಲೈವರೆಗೆ ವಾಡಿಕೆಯಂತೆ 182.6 ಎಂಎಂ ಮಳೆ ಆಗಬೇಕಾಗಿತ್ತು, 193.1ಎಂ.ಎಂ ಮಳೆಯಾಗಿದ್ದು, 6 ಮಿ ಮೀಟರ್ ಹೆಚ್ಚು ಮಳೆ ಆಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು ಈ ಬಾರಿ ಕಾಲುವೆಗೆ ಜುಲೈ 10ಕ್ಕೆ ನೀಡು ಬಿಡಲಾಗಿದೆ. ಇದರಿಂದಾಗಿ ರೈತರು ಭತ್ತ ನಾಟಿ ಮಾಡಲು ಭೂಮಿ ಹದಗೊಳಿಸಿದ್ದು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 60,735 ಹೆಕ್ಟೇರ್ ಪ್ರದೇಶ ಲಭ್ಯವಿದೆ. ಅದರಲ್ಲಿ 40,686 ಹೆಕ್ಟೇರ್ ನೀರಾವರಿ ಹಾಗೂ 20,049 ಹೆಕ್ಟೇರ್ ಖುಷ್ಕಿ ಪ್ರದೇಶ ಹೊಂದಿದ್ದು, ಈ ಬಾರಿಯ ಮಳೆಗೆ 24,565 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ, ಮುಸುಕಿನ ಜೋಳ, ಜೋಳ, ಸಜ್ಜೆ, ನವಣೆ, ಮೆಣಸಿನ ಕಾಯಿ, ಹತ್ತಿ, ಕಬ್ಬು ಸೇರಿದಂತೆ ಈಗಾಗಲೇ ಶೇ.48ರಷ್ಟು ಬಿತ್ತನೆಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಉತ್ತಮ ಮಳೆ ಹಾಗೂ ಕಾಲುವೆಗೆ ನೀರು ಬಿಟ್ಟಿರುವ ಹಿನ್ನಲೆಯಲ್ಲಿ ಬಿತ್ತನೆ ಹಾಗೂ ಭತ್ತದ ಸಸಿ ನಾಟಿ ಕಾರ್ಯ ಚುರುಕುಗೊಂಡಿದೆ. ರೈತರು ಹೆಚ್ಚು ಕಳೆನಾಶಕ ಬಳಸದೇ 30 ರಿಂದ 35 ದಿನಗಳ ಸಸಿಗಳನ್ನು ನಾಟಿಗೆ ಬಳಸುವುದು ಸೂಕ್ತ.
ಮಂಜುನಾಥ ರೆಡ್ಡಿ, ಕೃಷಿ ಸಹಾಯಕ ನಿರ್ದೇಶಕ ಸಿರುಗುಪ್ಪ

ತಾಲ್ಲೂಕಿನಾದ್ಯಂತ ತುಂಗಭದ್ರಾ ಅಚ್ಚುಕಟ್ಟು ಭಾಗದಲ್ಲಿ ಭತ್ತವನ್ನು ಹೆಚ್ಚು ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ 37,790 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಭತ್ತ ನಾಟಿಯ ಗುರಿ ಹೊಂದಲಾಗಿದೆ. ನದಿದಂಡೆ ಗ್ರಾಮಗಳ ರೈತರು ಪಂಪ್ ಸೆಟ್ ನೀರಾವರಿ ಮೂಲಕ ಈಗಾಗಲೇ ಭತ್ತದ ಸಸಿ ನಾಟಿ ಮಾಡಿದ್ದಾರೆ. ಇಲ್ಲಿ ಶೇ 25ರಷ್ಟು ನಾಟಿ ಕಾರ್ಯ ಪೂರ್ಣಗೊಂಡಿದೆ.

'ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದು ರೈತರಿಗೆ ಖುಷಿಯಾಗಿದೆ, ಮುಂಗಾರು ಮಳೆ ಉತ್ತಮವಾಗಿದ್ದು ಎರಡು ಬೆಳೆಗೆ ಅನುಕೂಲವಾಗುವ ವಿಶ್ವಾಸ ಇದೆ' ಎಂದು ರೈತ ಮುಖಂಡ ಬಂದೇ ನವಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.

ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿ ಬಳಿಯ ಹಳೇಕೋಟೆ ಮಾರೆಮ್ಮ ದೇವಸ್ಥಾನದ ಹೊಲಗಳಲ್ಲಿ ಮಹಿಳೆಯರು ಭತ್ತದ ಸಸಿ ಕೀಳುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.