ಬಳ್ಳಾರಿ: ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದಲ್ಲಿ ಸೋಮವಾರ ‘ಸಲಾಂ ಬಳ್ಳಾರಿ ಅಭಿಯಾನ’ ಕೈಗೊಂಡ ಅವರು, ಅದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದರು. ‘ನಾಗೇಂದ್ರಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರೂ ನಾಗೇಂದ್ರ ಮಂತ್ರಿಯಾಗಬೇಕೆಂದು ಮನವಿ ಮಾಡಿದ್ದಾರೆ’ ಎಂದರು.
ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಮತ್ತು ನಾಗೇಂದ್ರ ಅವರು ಕಾಣೆಯಾಗಿದ್ದಾರೆ ಎಂಬ ವಿಪಕ್ಷದವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವೈಯಕ್ತಿಕ ಕಾರಣಗಳಿಂದ ನಾಗೇಂದ್ರ ಅವರು ಕ್ಷೇತ್ರಕ್ಕೆ ಬರುತ್ತಿಲ್ಲ. ಶೀಘ್ರದಲ್ಲೇ ಬರುತ್ತಾರೆ. ಸಚಿವ ಜಮೀರ್ ಅಹಮದ್ ಅವರೂ ಶೀಘ್ರದಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಾರೆ’ ಎಂದರು.
ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬೃಹತ್ ಟವರ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಅದು ನಾಗೇಂದ್ರ ಅವರ ಕೈಯಿಂದಲೇ ಉದ್ಘಾಟನೆಯಾಗಲಿದೆ ಎಂದರು.
‘ಸಲಾಂ ಬಳ್ಳಾರಿ ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ, ಈಗಾಗಲೇ ಭೇಟಿ ನೀಡಲಾಗಿರುವ ವಾರ್ಡ್ ಸಂಖ್ಯೆ 6 ಮತ್ತು 13ರಲ್ಲಿನ ಸಮಸ್ಯೆಗಳನ್ನು ಆಧರಿಸಿ ಅಂದಾಜು ₹3.50 ಕೋಟಿ ಅನುದಾನದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದರು.
ಕಾಂಗ್ರೆಸ್ ಮುಖಂಡರಾದ ತೆಂಗಿನಕಾಯಿ ರಾಜಣ್ಣ, ತೆಂಗಿನಕಾಯಿ ಬಸವರಾಜ, ಮಡಿವಾಳಪ್ಪ, ತಿಮ್ಮಪ್ಪ, ಪೃಥ್ವಿರಾಜ, ಹರೀಶ್, ಎಂ.ಡಿ.ತೌಸಿಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಸೇನ್ ಪೀರಾಂ, ವೆಂಕಟೇಶ ಹೆಗಡೆ, ರಾಕೇಶ್ ವರ್ಮಾ, ಚಾನಾಳ್ ಶೇಖರ್, ರಸೂಲ್, ರಾಮು, ರಜಾಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.