ADVERTISEMENT

ವಿಜಯನಗರ | ‘ಹರಿಜನ ಕೇರಿಗಳಲ್ಲಿ ನಾಗೇಶಶಾಸ್ತ್ರಿ ಅಕ್ಷರ ದಾಸೋಹ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 13:52 IST
Last Updated 30 ಮಾರ್ಚ್ 2023, 13:52 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ವಿದ್ವಾಂಸ ವೈ. ನಾಗೇಶ ಶಾಸ್ತ್ರಿ ಅವರು ಹರಿಜನರ ಕೇರಿಗಳಿಗೆ ಹೋಗಿ ಅಕ್ಷರ ದಾಸೋಹ ಮಾಡಿದ ಮಹಾನುಭಾವರು. ಶರಣರ ಆಶಯದಂತೆ ಕೆಲಸ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ವೈ. ನಾಗೇಶಶಾಸ್ತ್ರಿ ದತ್ತಿ ನಿಧಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಳ್ಳಾರಿ ಜಿಲ್ಲೆಯ ಸಾಹಿತ್ಯ ಪರಂಪರೆ ಮತ್ತು ವೈ. ನಾಗೇಶ ಶಾಸ್ತ್ರಿ’ ಕುರಿತು ಮಾತನಾಡಿದರು.

ವ್ಯಾಕರಣ, ಛಂದಸ್ಸು ಮತ್ತು ಶಾಸ್ತ್ರ ಸಾಹಿತ್ಯಗಳ ಕಡೆಗೆ ಶಾಸ್ತ್ರಿ ಅವರಿಗೆ ಹೆಚ್ಚಿನ ಒಲವು ಇತ್ತು. ಅನ್ಯ ಭಾಷೆಗಳ ಪ್ರಭಾವದ ನಡುವೆ ಕನ್ನಡದ ವಾತಾವರಣವನ್ನು ನಿರ್ಮಿಸಲು ಶಾಸ್ತ್ರಿಗಳು ದಣಿವರಿಯದೆ ದುಡಿದಿದ್ದರು ಎಂದು ಸ್ಮರಿಸಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ನಾಗೇಶ ಶಾಸ್ತ್ರಿ ಅವರು ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದರು. ಇಂತಹ ಕಾರ್ಯಕ್ರಮಗಳು ನಮಗೆಲ್ಲರಿಗೂ ಪ್ರೇರಣೆ ನೀಡಲಿ ಎಂದು ಆಶಿಸಿದರು.

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿ, ಬಳ್ಳಾರಿ ಪ್ರದೇಶವು ಕನ್ನಡ ನಾಡಿಗೆ ಸೇರುವಲ್ಲಿ ಹಾಗೂ ಏಕೀಕರಣಕ್ಕೆ ಶಾಸ್ತ್ರಿಗಳ ಕೊಡುಗೆ ಅಪಾರವಾಗಿದೆ ಎಂದರು.

ವಿಭಾಗದ ಮುಖ್ಯಸ್ಥ ಸಿ.ವೆಂಕಟೇಶ, ಪ್ರಾಧ್ಯಾಪಕರಾದ ಎಫ್.ಟಿ. ಹಳ್ಳಿಕೇರಿ, ರಮೇಶ ನಾಯಕ, ಮಾಧವ ಪೆರಾಜೆ, ಸುಚೇತ ನವರತ್ನ, ಪ್ರಶಾಂತ್‌ ಎ.ಎಸ್‌., ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.