
ಕೂಡ್ಲಿಗಿ: ಎರಡು ತಿಂಗಳಿಂದ ಬಾಕಿ ಇರುವ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಟಿಯುಸಿ ಸಹಯೋಗದಲ್ಲಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ನಿಂದ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಎಐಟಿಯುಸಿ ಮುಖಂಡ ಎಚ್. ವೀರಣ್ಣ ಮಾತನಾಡಿ, ‘ಶಾಲೆಯ ರಜೆ ನಂತರ ಪೂರೈಕೆಯಾದ ಗೋಧಿ, ಬೇಳೆಯಲ್ಲಿ ಹುಳು ಇದ್ದು, ಅವನ್ನೇ ಉಪಯೋಗಿಸುವಂತೆ ಹೇಳಲಾಗುತ್ತದೆ. ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಿಸಿಯೂಟ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಸಮರ್ಪಕವಾಗಿ ವೇತನ ಸಿಗುತ್ತಿಲ್ಲ’ ಎಂದು ಆರೋಪಿಸಿದರು.
‘ಕೆಂಚಮಲ್ಲನಹಳ್ಳಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಗ ಅಪಾಯಕ್ಕೊಳಗಾದ ಮಹಿಳೆಯನ್ನು ಅಧಿಕಾರಿಗಳು ಭೇಟಿ ಮಾಡಿಲ್ಲ. ಮಹಿಳೆಗೆ ತಕ್ಷಣ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಉಪ ತಹಶೀಲ್ದಾರ್ ಮದಲಹಟ್ಟಿ ಹಾಗೂ ಬಿಸಿಯೂಟ ಯೋಜನೆ ಕಚೇರಿ ಸಿಬ್ಬಂದಿ ನಟರಾಜಸ್ವಾಮಿ ಮನವಿ ಸ್ವೀಕರಿಸಿದರು.
ಫೆಡರೇಷನ್ನ ತಾಲ್ಲೂಕು ಘಟಕದ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ನಾಗಮ್ಮ, ತಿಪ್ಪಕ್ಕ, ಕಾರ್ಯದರ್ಶಿ ಉಷಾರಾಣಿ, ಕೊತ್ಲಮ್ಮ, ಜಯಮ್ಮ, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯು. ಪೆನ್ನಪ್ಪ, ಸಂಚಾಲಕ ಡಿ. ಅನಂತೇಶ, ಕಿಸನ್ ಸಭಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ರಮೇಶ, ಎನ್ಎಫ್ಐಡಬ್ಲ್ಯು ತಾಲ್ಲೂಕು ಘಟಕದ ಅಧ್ಯಕ್ಷೆ ಮಮತ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.