ADVERTISEMENT

ಗುರುಕುಲ ಮಾದರಿ ಶಿಕ್ಷಣ ಅಗತ್ಯ

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:50 IST
Last Updated 14 ನವೆಂಬರ್ 2022, 5:50 IST
ಹುಬ್ಬಳ್ಳಿ ವಿದ್ಯಾನಗರ ಲಕ್ಷ್ಮೀವನ ಪರಿಸರದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕಟ್ಟಡದ ಪುನಶ್ಚೇತನ ಪೂಜಾ ಸಮಾರಂಭ ಜರುಗಿತು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ಶಾಸಕ ಜಗದೀಶ ಶೆಟ್ಟರ್ ಇದ್ದಾರೆ
ಹುಬ್ಬಳ್ಳಿ ವಿದ್ಯಾನಗರ ಲಕ್ಷ್ಮೀವನ ಪರಿಸರದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕಟ್ಟಡದ ಪುನಶ್ಚೇತನ ಪೂಜಾ ಸಮಾರಂಭ ಜರುಗಿತು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ಶಾಸಕ ಜಗದೀಶ ಶೆಟ್ಟರ್ ಇದ್ದಾರೆ   

ಹುಬ್ಬಳ್ಳಿ: ‘ಸಮಾಜದಲ್ಲಿ ಸಂಸ್ಕಾರ, ಸದ್ವಿಚಾರ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವಿದೆ.ಜೀವನ ಉನ್ನತಿಗೆ ಶಿಕ್ಷಣ ಅತ್ಯಗತ್ಯ. ಭೌತಿಕ ಶಿಕ್ಷಣದ ಜೊತೆಗೆ, ಧಾರ್ಮಿಕ ಶಿಕ್ಷಣದ ಅರಿವು ಬೇಕಾಗುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿದ್ಯಾನಗರ ಲಕ್ಷ್ಮೀವನ ಪರಿಸರದಲ್ಲಿ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕಟ್ಟಡದ ಪುನಶ್ಚೇತನ ಪೂಜಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಸುಖ– ಶಾಂತಿಯ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ. ಈ ಭಾಗದ ವೀರಮಾಹೇಶ್ವರ ಜಂಗಮ ಪಟುಗಳಿಗೆ ಸಂಸ್ಕೃತ, ಜೋತಿಷ್ಯ ಮತ್ತು ವೈದಿಕ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಆದಷ್ಟು ಬೇಗ ಕಟ್ಟಡ ಕಾರ್ಯ ಪೂರ್ಣಗೊಳ್ಳಲು ಜನಪ್ರತಿನಿಧಿಗಳು ಸಹಕರಿಸಬೇಕು’ ಎಂದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಭಾರತವು ಧರ್ಮ, ಸಂಸ್ಕೃತಿ ಹಾಗೂ ಪರಂಪರೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದೆ. ನಾಡಿನ ಪೀಠ ಮತ್ತು ಮಠಗಳು ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿವೆ. ರಂಭಾಪುರಿ ಜಗದ್ಗುರುಗಳು ಧರ್ಮ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಗುರುಕುಲ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ₹10 ಲಕ್ಷ ಮತ್ತು ಸರಕಾರದಿಂದ ವಿಶೇಷ ನೆರವು ದೊರಕಿಸಿ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ, ಲಿಂಗರಾಜ ಪಾಟೀಲ, ಹೇಮರಡ್ಡಿ ಕೊಣ್ಣೂರು, ರಮೇಶ ಪಾಟೀಲ, ಮಹೇಶ ಬುರ್ಲಿ, ಇಂಧುಮತಿ ಮಾನ್ವಿ, ವಿಶ್ವನಾಥ ಹಿರೇಗೌಡರ ಇದ್ದರು. ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹದೇವಪ್ಪ ಕುಮಶಿ ಸ್ವಾಮೀಜಿಗೆ ಗೌರವ ಸಮರ್ಪಿಸಿದರು. ಕಾರ್ಯಕ್ರಮದ ನಂತರ ಸಚಿವ ಜೋಶಿ ಅವರು ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.