ಹೊಸಪೇಟೆ: ‘ತಾಂತ್ರಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ದಿಗ್ಗಜ್ಜ ರಾಷ್ಟ್ರವಾಗಿ ಬೆಳೆಯಬೇಕಾದರೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಶೇ 2ರಷ್ಟು ಅನುದಾನ ಮೀಸಲಿಡಬೇಕು’ ಎಂದುಸಿಕಂದರಾಬಾದ್ನ ‘ಕಾರ್ಪೋರೇಟ್ ಪ್ರೊಫಷನಲ್ ಅಕಾಡೆಮಿ’ಯ ನಿರ್ದೇಶಕ ಡಾ. ವಿಜಯ ತರಾದ್ ತಿಳಿಸಿದರು.
ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಸದ್ಯಭಾರತವು ದೇಶದ ಜಿ.ಡಿ.ಪಿ.ಯ ಶೇಕಡಾ ಒಂದರಷ್ಟನ್ನು ಮಾತ್ರ ಸಂಶೋಧನಾ ಉದ್ದೇಶಗಳಿಗೆ ಹಣ ವಿನಿಯೋಗಿಸುತ್ತಿದೆ. ಅದನ್ನು ದುಪ್ಪಟ್ಟುಗೊಳಿಸಬೇಕು. ಭಾರತದ ತಾಂತ್ರಿಕ ಶಿಕ್ಷಣ ವ್ಯವಸ್ಥೆಯು, ಸಂಶೋಧನೆಯನ್ನು ಗಂಭೀರವಾಗಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಕೋರಿಯಾ, ತೈವಾನ್, ಸಿಂಗಪುರ ಹಾಗೂ ಚೀನಾ ಸಂಶೋಧನೆಗೆ ದಶಕಗಳಿಂದ ಹೆಚ್ಚಿನ ಒತ್ತು ನೀಡುತ್ತ ಬಂದಿರುವುದರಿಂದ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿವೆ’ ಎಂದರು.
ವಿಜ್ಞಾನಿ ಎನ್. ವಿವೇಕಾನಂದನ್ ಮಾತನಾಡಿ, ‘ಸರ್ಕಾರಗಳು ದೇಶದ ಆರ್ಥಿಕ, ತಾಂತ್ರಿಕ ನೀತಿ ರೂಪಿಸುವಾಗ ಮಾನವನ ಮೂಲ ಅವಶ್ಯಕತೆಗಳಾದ ನೀರು, ವಿದ್ಯುತ್, ಪರಿಸರದ ಗುಣಮಟ್ಟ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು’ ಎಂದು ತಿಳಿಸಿದರು.
‘ನೀತಿಗಳಿಗೆ ಅನುಗುಣವಾಗಿ ಸಂಶೋಧನೆ ತನ್ನ ದಿಕ್ಕನ್ನು ನಿರ್ಧರಿಸಬೇಕು. ಉತ್ತರ ಹಾಗೂ ದಕ್ಷಿಣ ಭಾರತದ ನದಿ ಜೋಡಣೆಗಳ ಸಾಧಕ ಮತ್ತು ಬಾಧಕಗಳ ಬಗ್ಗೆ ಚರ್ಚೆ ನಡೆಯುವ ಈ ಕಾಲದಲ್ಲಿ ಈ ವಿಷಯದಲ್ಲಿನ ಸಂಶೋಧನಾ ಚಟುವಟಿಕೆಗಳು ಸಮಾಜಕ್ಕೆ ಉಪಯುಕ್ತ ಮಾದರಿಗಳಾಗಬಲ್ಲವು’ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಶಶಿಧರ,ಕಾಲೇಜು ಆಡಳಿತ ಮಂಡಳಿಯ ಸದಸ್ಯ ಏಕಾಮರೇಶ, ಚೆನ್ನೈನ ಯು.ಎಂ. ರೋಹಿತ್, ಶಿವಕೇಶವ ಕುಮಾರ, ಪ್ರೊ. ಶಾಂತಕುಮಾರ್,ವೀರಭದ್ರಪ್ಪ ಅಲ್ಗೂರ್, ಪ್ರೊ. ಕೆ. ಪೂರ್ಣಿಮಾ, ಪ್ರೊ. ಫಿರ್ದೋಸ್ ಪರ್ವೀನ್, ಪ್ರೊ. ಮಧ್ವರಾಜ, ಪ್ರೊ. ಮಹೇಶ ಓಬಣ್ಣನವರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.