
ತೆಕ್ಕಲಕೋಟೆ: ‘ನಿಟ್ಟೂರು ಹಾಗೂ ಸಿಂಗಾಪುರ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಕೇಂದ್ರ ಸರ್ಕಾರದ ಸೇತುಬಂಧ ಯೋಜನೆಯಡಿ ಮಂಜೂರಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿಗೆ ವಿಳಂಬವಾಗಿದೆ’ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಹೇಳಿದರು.
ಪಟ್ಟಣದ ನಿಟ್ಟೂರು ರಸ್ತೆಯ ಆದೋನಿ ಸಾಹೇಬ್ ಉರುಸು ಪ್ರಯುಕ್ತ ದರ್ಗಾಕ್ಕೆ ಚಾದರ ಸಮರ್ಪಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಈಗಾಗಲೇ ₹ 6.5 ಕೋಟಿ ಮಂಜೂರಾತಿ ನೀಡಿದೆ. ಆದರೆ ಕೇಂದ್ರ ಸರ್ಕಾರ ಸಿಆರ್ಎಫ್ ಯೋಜನೆಯ ಅಡಿ ಅನುದಾನ ಪಡೆಯಿರಿ ಎಂದು ರಾಜ್ಯ ಸರ್ಕಾರಕ್ಕೆ ತಿಳಿಸಿದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 150ಎ ನಿಧಾನಗತಿ ಕಾಮಗಾರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು, ‘ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರ ನೇರ ಕಾರಣನಾಗಿದ್ದು, ಕಾಮಗಾರಿ ಮುಗಿದ ನಂತರ ತಕ್ಷಣವೇ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದರು.
ಅಖಿಲ ಕರ್ನಾಟಕ ಪಿಂಜಾರ್ ನದಾಫ್ ಸಂಘದ ವತಿಯಿಂದ ಗ್ರಂಥಾಲಯ, ಸಾರ್ವಜನಿಕ ಶೌಚಾಲಯ ಹಾಗೂ ಮಸೀದಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಆನಂದ, ಮುಖಂಡರಾದ ಮಲ್ಲಿಕಾರ್ಜುನ ಬಾಲಪ್ಪ, ನರೇಂದ್ರ ಸಿಂಹ, ದೇವರಮನೆ ನಾಗಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಎಸ್. ಅಜರುದ್ದೀನ್, ವಕೀಲ ಖಾದರ್ ಬಾಷ, ವಲಿಭಾಷ ಹಾಗೂ ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.