ಸಿರುಗುಪ್ಪ: ಆರೋಗ್ಯವಂತ ಮಕ್ಕಳಿಂದ ಆರೋಗ್ಯಕರ ಸಮಾಜ ಕಟ್ಟಬಹುದು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್. ಸಲಹೆ ನೀಡಿದರು.
ತಾಲ್ಲೂಕಿನ ದೇಶನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಿರುಗುಪ್ಪ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸೋಮವಾರ ನಡೆದ ವಿಶ್ವ ಪೌಷ್ಟಿಕ ಆಹಾರ ದಿನಾಚರೆಣೆಯ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಯವದಲ್ಲಿ ಬೆಳೆದ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳು ಇರುತ್ತವೆ. ಇಂತಹ ಆಹಾರ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚು ಸಿಗುತ್ತದೆ. ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ನೀಡಲು ಸರ್ಕಾರವು ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳ ಸದ್ಬಳಕೆ ಪರಿಪೂರ್ಣವಾದಲ್ಲಿ ಅಪೌಷ್ಟಿಕತೆ ಹೊಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಉಪ್ಪಾರ ವೆಂಕೋಬ ಮಾತನಾಡಿ, ನಮ್ಮ ಅಜ್ಜ, ಅಜ್ಜಿಯರ ಆಹಾರ ಪದ್ದತಿಯಿಂದ ಯಾವುದೇ ಕಾಯಿಲೆಗಳು ಬರುತ್ತಿರಲಿಲ್ಲ, ಅವರ ಜೀವನ ಶೈಲಿ ಇಂದಿನ ಪೀಳಿಗೆಗಳಿಗೆ ದಾರಿದೀಪವಾಗಿದೆ ಎಂದು ಹೇಳಿದರು.
ಉಪತಹಶೀಲ್ದಾರ್ ಸಿದ್ದರ್ಥ ಕಾರಂಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಮ್ಮ, ತಾಲ್ಲೂಕು ಪಂಚಾಯತಿ ಇ.ಒ ಪವನಕುಮಾರ್, ಸರ್ಕಾರಿ ಸಹಾಯಕ ಅಭಿಯೋಜಕ ಶಿವರಾಜ, ಪಿ.ಡಿ.ಒ ಅನ್ನಪೂರ್ಣ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ, ವಕೀಲರ ಸಂಘದ ಉಪಾಧ್ಯಕ್ಷ ಎಂ.ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ್, ವಕೀಲರಾದ ಮಂಜುಳ, ಅಬ್ದುಲ್ ರಾರಾವಿ, ಮಲ್ಲಿಗೌಡ, ಮಹೇಶ, ವೆಂಕಟೇಶನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.