ಬಳ್ಳಾರಿ: ಐಎಎಸ್ ಪರೀಕ್ಷೆಗೆ ಸಿದ್ಧತೆ ಕುರಿತು ನಗರದಲ್ಲಿ ಜಿಲ್ಲಾಡಳಿತ ಭಾನುವಾರ ಸಂಜೆ ರೂಪಿಸಿದ್ದ ಕಾರ್ಯಾಗಾರ ಮುಕ್ತಾಯವಾದ ಬಳಿಕ ಮಾಹಿತಿ ಪುಸ್ತಕಗಳನ್ನು ಸ್ಪರ್ಧಾಕಾಂಕ್ಷಿಗಳಿಗೆ ಸಮರ್ಪಕವಾಗಿ ವಿತರಿಸದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಯುವಜನರೆಡೆಗೆ ವೇದಿಕೆ ಮೇಲಿಂದ ಎಸೆದರು.
ಹಾಗೆ ತಮ್ಮೆಡೆಗೆ ಎಸೆದ ಪುಸ್ತಕಗಳನ್ನು ತೆಗೆದುಕೊಳ್ಳಲು ನೂರಾರು ಮಂದಿ ಮುನ್ನುಗ್ಗಿದ ಪರಿಣಾಮ ನೂಕುನುಗ್ಗಲು ಏರ್ಪಟ್ಟಿತ್ತು.
‘ಕಾರ್ಯಾಗಾರ ಕೊನೆಗೆ ಮಾಹಿತಿ ಪುಸ್ತಕಗಳನ್ನು ಎಲ್ಲರಿಗೂ ವಿತರಿಸಲಾಗುವುದು. ಒಂದು ಸಾವಿರ ಪುಸ್ತಕಗಳನ್ನು ಮುದ್ರಿಸಲಾಗಿದ್ದು, ಸಿಗದವರು ನಿರಾಶರಾಗಬೇಡಿ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರ ಡಾ.ಕೆ.ವಿ.ರಾಜೇಂದ್ರ ಹೇಳಿದ್ದರು.
ಕೊನೆಯಲ್ಲಿ ವೇದಿಕೆಯ ಮುಂಭಾಗ ನೆಲದಲ್ಲಿ ಇಡಲಾಗಿದ್ದ ಪುಸ್ತಕದ ಬಂಡಲ್ಗಳನ್ನು ಸಹಾಯಕರಿಂದ ಮೇಲಕ್ಕೆ ಪಡೆದ ಅಧಿಕಾರಿ ಬಿ.ನಾಗರಾಜ, ಎರಡೂ ಕೈಯಿಂದ ಏಕಾಏಕಿ ಎರಚಿದರು. ಅದನ್ನು ನಿರೀಕ್ಷಿಸಿದ ಯುವಜನ ಪುಸ್ತಕಗಳಿಗಾಗಿ ಮುಗಿಬಿದ್ದರು. ನಂತರವೂ ಹಲವು ಬಂಡಲ್ಗಳನ್ನು ಅದೇ ರೀತಿ ಎಸೆಯಲಾಯಿತು. ಸಿಬ್ಬಂದಿ ಕೂಡ ಯುವಜನರೊಂದಿಗೆ ಅನುಚಿತವಾಗಿ ವರ್ತಿಸಿದರು.
‘ದೂರದ ಊರುಗಳಿಂದ ಬಂದಿದ್ದೇವೆ. ರಾತ್ರಿ ಬಸ್ ವ್ಯವಸ್ಥೆಯೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾಹಿತಿ ಪುಸ್ತಕವೂ ದೊರಕಲಿಲ್ಲ. ಕಾರ್ಯಾಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನ ಬರುತ್ತಾರೆಂದು ಗೊತ್ತಿದ್ದೂ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ’ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.