ADVERTISEMENT

ಟಿ.ಎಸ್‌.ಪಿ. ಜಾಗದಲ್ಲಿ ಲೇಔಟ್‌ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:30 IST
Last Updated 27 ಆಗಸ್ಟ್ 2019, 19:30 IST
ವಿಜಯನಗರ ನಾಗರಿಕರ ವೇದಿಕೆಯ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು
ವಿಜಯನಗರ ನಾಗರಿಕರ ವೇದಿಕೆಯ ಕಾರ್ಯಕರ್ತರು ಮಂಗಳವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ: ನಗರದ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿ.ಎಸ್‌.ಪಿ.) ಜಾಗದಲ್ಲಿ ಲೇಔಟ್‌ ನಿರ್ಮಿಸುತ್ತಿರುವುದನ್ನು ವಿರೋಧಿಸಿ ವಿಜಯನಗರ ನಾಗರಿಕರ ವೇದಿಕೆಯ ಕಾರ್ಯಕರ್ತರು ಮಂಗಳವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಟಿ.ಎಸ್‌.ಪಿ.ಗೆ ಸೇರಿದ 83 ಎಕರೆ ಜಾಗದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ವಸತಿ ಉದ್ದೇಶದ ಲೇಔಟ್‌ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಸಾರ್ವಜನಿಕರಿಂದ ನೋಂದಣಿ ಶುಲ್ಕ, ಆರಂಭಿಕ ಠೇವಣಿ ಸಂಗ್ರಹ ಪ್ರಕಟಣೆ ಹೊರಡಿಸಿದ್ದು, ಕೂಡಲೇ ಅದನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘60 ವರ್ಷಗಳ ಹಿಂದೆ ರೈತರಿಂದ ಕಡಿಮೆ ಬೆಲೆಯಲ್ಲಿ ಸಾರ್ವಜನಿಕ ಉದ್ದೆಶಕ್ಕಾಗಿ ಸ್ವಾಧೀನಪಡಿಸಿಕೊಂಡ ಸದರಿ ಜಮೀನನ್ನು ಸಾರ್ವಜನಿಕರಿಗೆ ಶಾಶ್ವತವಾಗಿ ಉಪಯುಕ್ತವಾಗುವ ಉದ್ದೇಶಕ್ಕಾಗಿ ಮಾತ್ರ ಕಾಯ್ದಿರಿಸಬೇಕು. ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಹೊಸಪೇಟೆ ತಾಲ್ಲೂಕಿಗೆ ಸಾವಿರಾರು ಕೋಟಿ ಅನುದಾನ ಬರುತ್ತದೆ. ಅದರಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆ, ಕೃಷಿ ತರಬೇತಿ ಕೇಂದ್ರ ಕೌಶಲ ಅಭಿವೃದ್ಧಿ ತರಬೇತಿ ಸಂಸ್ಥೆ, ಸೂಪರ್‌ ಸ್ಪೆಷಾಲಿಸಿ ಆಸ್ಪತ್ರೆ, ನಗರ ಸಾರಿಗೆ ನಿಲ್ದಾಣ ನಿರ್ಮಿಸಬೇಕು. ಹೊಸಪೇಟೆ ಜಿಲ್ಲೆ ಮಾಡಬೇಕು ಎಂಬ ಒತ್ತಾಯವಿದೆ. ಒಂದುವೇಳೆ ಸರ್ಕಾರ ಜಿಲ್ಲೆ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ, ಮಿನಿ ವಿಧಾನಸೌಧ ನಿರ್ಮಿಸಲು ಆ ಜಾಗ ಅನುಕೂಲವಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ವೇದಿಕೆಯ ಪ್ರಮುಖರಾದವೈ.ಯಮುನೇಶ್, ದೀಪಕ್‌ ಕುಮಾರ್‌ ಸಿಂಗ್‌, ಎಂ.ಸಿ.ವೀರಸ್ವಾಮಿ,ಗುಜ್ಜಲ್‍ ನಾಗರಾಜ್,ತಾರಿಹಳ್ಳಿ ಹನುಮಂತಪ್ಪ, ನಿಂಬಗಲ್ ರಾಮಕೃಷ್ಣ, ಎಚ್.ವೆಂಕಟೇಶ್,ಖಾಜಾಹುಸೇನ್ ನಿಯಾಜಿ,ಜೆ.ಕಾರ್ತಿಕ್,ಪ.ಯ.ಗಣೇಶ್,ಸಾಲಿ ಸಿದ್ದಯ್ಯ ಸ್ವಾಮಿ,ಕುಬೇರ ದಲ್ಲಾಳಿ, ಸಣ್ಣ ಮಾರೆಪ್ಪ,ಕಾರಿಗನೂರು ಲಕ್ಷ್ಮಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.