ADVERTISEMENT

‘ಮಾತನಾಡುವ ಶಕ್ತಿ ನೀಡಿದ್ದು ಪ್ರಜಾವಾಣಿ’: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ‌ ಜೋಗತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:50 IST
Last Updated 20 ಜುಲೈ 2025, 5:50 IST
   

ಹೊಸಪೇಟೆ (ವಿಜಯನಗರ): ‘ಯಾವ ಜನ್ಮದ ಪುಣ್ಯವೋ ನನ್ನನ್ನು ಹಳ್ಳಿಯಿಂದ ದಿಲ್ಲಿಗೆ ಕಳುಹಿಸಿ ಮಾತನಾಡುವ ಶಕ್ತಿಯನ್ನು ನೀಡಿದ್ದು ಪ್ರಜಾವಾಣಿ’ ಎಂದು ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ‘ಪ್ರಜಾವಾಣಿ’ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಮತ್ತು ‘ಫ್ರೀಡಂ ಹೆಲ್ದಿ ಕುಕ್ಕಿಂಗ್ ಆಯಿಲ್‌’ ಸಹಯೋಗದಲ್ಲಿ ಶನಿವಾರ ನಡೆದ ‘ಭೂಮಿಕಾ ಕ್ಲಬ್’ ಮಹಿಳೆಯರ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

‘ಕರ್ನಾಟಕ ದರ್ಶನದಲ್ಲಿ 2000ನೇ ಇಸವಿಯಲ್ಲಿ ಪ್ರಕಟಗೊಂಡ ‘ಕಾಳವ್ವ ಜೋಗತಿ ಎಲ್ಲಿ ನಿನ್ನ ಅರಮನೆ’ ಯಿಂದಲೇ 15 ದಿನಗಳಲ್ಲಿ ಜನಪ್ರತಿನಿಧಿಗಳು ಮನೆ ನಿರ್ಮಿಸಿಕೊಡಲು ಸಾಧ್ಯವಾಯಿತು, ಪತ್ರಿಕೆಯ ಶಕ್ತಿಯಿಂದಲೇ ಮನೆ ಸಿಗುವಂತಾಯಿತು. ಮೊದಲಬಾರಿಗೆ ತೃತೀಯ ಲಿಂಗಿ ಕಾಳವ್ವ ಜೋಗತಿ ಅವರಿಗೆ ರಾಜ್ಯೋತ್ಸವ ಸಿಗುವಂತಾಯಿತು ಎಂದು ‘ಪ್ರಜಾವಾಣಿ’ಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ಪ್ರಜಾವಾಣಿಯ ‘ನಮ್ಮ ಊರು ನಮ್ಮ ಜಿಲ್ಲೆ’ ಅಂಕಣದಲ್ಲಿ ಲೇಖನ ಪ್ರಕಟಗೊಂಡ ಅನೇಕರಿಗೆ ಜಾನಪದ ಅಕಾಡೆಮಿ ಪ್ರಶಸ್ತಿಗಳು ಮತ್ತು ಮಸಾಶನ ಸಿಕ್ಕಿದೆ ಎಂದರು.

‘ಭೂಮಿಕಾ ಕ್ಲಬ್’ ರಾಜ್ಯದ ಅನೇಕ ಸಾಧಕಿಯರನ್ನು ಗುರುತಿಸಲು ಸಾಧ್ಯವಾಗಿದೆ. ಎಲ್ಲರ ಬದುಕಿನಲ್ಲಿ ‘ಪ್ರಜಾವಾಣಿ’ ಗುರುತರವಾದ ಶಕ್ತಿ ನೀಡಿದೆ ಎಂದರು.

ತೃತೀಯ ಲಿಂಗಿಯೊಬ್ಬರಿಗೆ ಭೂಮಿಕಾ ಕ್ಲಬ್ ಉದ್ಘಾಟಿಸುವ ಆವಕಾಶ ಕಲ್ಪಿಸುವ‌ ಮೂಲಕ ‘ಪ್ರಜಾವಾಣಿ’ ಸಮಾನತೆಯ ವೇದಿಕೆ ಕಲ್ಪಿಸಿದೆ ಎಂದರು.

‘ಉತ್ತಮ ಶಿಕ್ಷಣ ಕೊಡಿಸಿ’:

‘ತೃತೀಯ ಲಿಂಗಿ ಮಕ್ಕಳು ಜನಿಸಿದರೆ ಅವರನ್ನು ಮನೆಯಿಂದ ಹೊರಹಾಕಬೇಡಿ, ಉತ್ತಮ ಶಿಕ್ಷಣ ಕೊಡಿಸಿ, ಆಗ ಅವರು ನನ್ನಂತೆ ಖ್ಯಾತಿ ಗಳಿಸುವುದು ಸಾಧ್ಯವಾಗುತ್ತದೆ. ಪೋಷಕರು ಅವರನ್ನು ತಿರಸ್ಕರಿಸಿದರೆ ರಸ್ತೆ ಮಧ್ಯೆ ಭಿಕ್ಷೆ ಬೇಡುವ, ಸೆಕ್ಸ್ ವರ್ಕರ್ಸ್ ಆಗುವ ಅಪಾಯವಿದೆ’ ಎಂದು ಮಂಜಮ್ಮ ಜೋಗತಿ ಕಿವಿಮಾತು ಹೇಳಿದರು.ಪುರವಣಿ ತೆಗೆಯಬೇಡಿ: ‘ಕರ್ನಾಟಕ ದರ್ಶನ’ ಸೇರಿದಂತೆ ವಿವಿಧ ವಿಶೇಷ ಪುರವಣಿಗಳನ್ನು ರದ್ದು ಮಾಡಬೇಡಿ ಎಂದು ಅವರು ವಿನಂತಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.