ಹೊಸಪೇಟೆ: ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ನಾಲ್ಕು ದಿನಗಳಲ್ಲೇ ಕಳ್ಳತನ ಪ್ರಕರಣ ಬೇಧಿಸಿ, ಚಿನ್ನದ ನಾಣ್ಯ, ನಗದು ಹಾಗೂ ಇಬ್ಬರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ನ. 6ರಂದು ಹಂಪಿ ರಸ್ತೆಯ ಮುನೀರ್ ಟ್ರ್ಯಾಕ್ಟರ್ ಶೋ ರೂಂನಲ್ಲಿ ಕಳ್ಳತನ ನಡೆದಿತ್ತು. ₹16,44,000 ನಗದು, ಗ್ರಾಹಕರಿಗೆ ಬಹುಮಾನದ ರೂಪದಲ್ಲಿ ಕೊಡಲು ತಂದಿಟ್ಟಿದ್ದ ₹44,000 ಮೌಲ್ಯದ ಚಿನ್ನದ ನಾಣ್ಯವನ್ನು ಕಳ್ಳರು ಕದೊಯ್ದಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಇಲ್ಲಿನ ಅನಂತಶಯನಗುಡಿಯ ನಿವಾಸಿ, ಆಟೊ ಚಾಲಕ ಹುಲುಗಪ್ಪ ಹನುಮಂತಪ್ಪ (22), ಮುನೀರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಪ್ಪರದಹಳ್ಳಿಯ ನಿವಾಸಿ ಆಸಿಫ್ ಸತ್ತಾರ್ ಸಾಬ್ (28) ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ₹44,000 ಮೌಲ್ಯದ 10 ಗ್ರಾಂ ಬಂಗಾರದ ನಾಣ್ಯ ಮತ್ತು ₹15,80,000 ನಗದು ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ, ಸಿಬ್ಬಂದಿ ಎಚ್.ಸಿ.ಬಿ. ರಾಘವೇಂದ್ರ, ಪಿ. ಮಾಣಿಕ್ಯ ರೆಡ್ಡಿ, ಎ. ಕೊಟ್ರೇಶ್, ಓ. ರಮೇಶ ಅವರನ್ನು ಒಳಗೊಂಡ ಪೊಲೀಸ್ ತಂಡ ಪ್ರಕರಣ ಬೇಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.