ಬಳ್ಳಾರಿ: ‘ಹುತಾತ್ಮ ಪೊಲೀಸರ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಿ ನೆರವಾಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಶೆನ್ಸ್ ನ್ಯಾಯಾಧೀಶ ಕೃಷ್ಣ ಬಿ.ಅಸೋಡೆ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, 'ಕುಖ್ಯಾತರನ್ನು ಬಂಧಿಸಲು ಹಲವು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ತ್ಯಾಗ ಎಂದಿಗೂ ವ್ಯರ್ಥವಾಗಬಾರದು. ಹುತಾತ್ಮರಿಗೆ ಸರಿಯಾದ ಪರಿಹಾರ ನೀಡಿ, ಅವರ ಕುಟುಂಬಕ್ಕೆ ನೆರವಾಗಬೇಕು. ಹಿರಿಯ ಅಧಿಕಾರಿಗಳು ಹುತಾತ್ಮ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಕ್ರಮವಹಿಸಬೇಕು' ಎಂದರು.
‘ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದದ್ದು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳಿಂದ ದೂರವಿದ್ದು ಜನರಿಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂಥ ತ್ಯಾಗ ಮನೋಭಾವ, ಸೇವೆ ಎಲ್ಲರಿಂದಲೂ ಸಾಧ್ಯವಿಲ್ಲ’ ಎಂದರು.
‘ಪೊಲೀಸರೂ ಕೂಡ ನ್ಯಾಯಾಧೀಶರೇ. ಜನ ತಮಗೆ ಸಮಸ್ಯೆಯಾದರೇ ಮೊದಲು ಪೊಲೀಸರ ಬಳಿಗೇ ಹೋಗುವುದು ಸಾಮಾನ್ಯ’ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ, ‘ದೇಶದಲ್ಲಿ ಪ್ರಸಕ್ತ ವರ್ಷ 264 ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೇ ಮರಣಹೊಂದಿದ್ದು,ಅದರಲ್ಲಿ ಕರ್ನಾಟಕದ 17 ಮಂದಿ ಇದ್ದಾರೆ’ ಎಂದರು.
'ಕೋವಿಡ್ ಬಿಕ್ಕಟ್ಟಿನಲ್ಲಿ ಸೇನಾನಿಗಳಾಗಿ ಸೇವೆ ಸಲ್ಲಿಸುವಾಗಲೇ ಅನೇಕರು ಸೋಂಕು ತಗುಲಿ ಮೃತಪಟ್ಟರು. ಬಳ್ಳಾರಿಯಲ್ಲಿಯೂ 9 ಪೊಲೀಸ್ ಸಿಬ್ಬಂದಿ ಮೃತಪಟ್ಟರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.