ಕನ್ನಡ ಸಾಹಿತ್ಯ ಸಮ್ಮೇಳನ
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಬಳ್ಳಾರಿ ನಗರದಲ್ಲಿ ಭಾನುವಾರ ನಡೆಯಲಿದ್ದು, 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಘೋಷಣೆಗೆ ಸಿದ್ಧತೆ ನಡೆದಿದೆ.
ಕಸಾಪ ಅಧ್ಯಕ್ಷ ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಮೊದಲಿಗೆ ಕಾರ್ಯಕಾರಿ ಸಭೆ ನಡೆಯಲಿದ್ದು, ಅಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಯಲಿದೆ. ಬಳಿಕ ಸಮ್ಮೇಳನಾಧ್ಯಕ್ಷರನ್ನು ಘೋಷಿಸಲಾಗುತ್ತದೆ.
ಹೊಸ ಸಂಪ್ರದಾಯ: ಈ ಬಾರಿಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯು ಕಸಾಪ ಇತಿಹಾಸದಲ್ಲೇ ಹೊಸ ಪರಂಪರೆಗೆ ನಾಂದಿ ಹಾಡಲಿದೆ. ಸಮ್ಮೇಳನ ನಡೆಯುವ ಸ್ಥಳ ಹಾಗೂ ದಿನಾಂಕ ಅಂತಿಮವಾಗದೆ, ಸ್ವಾಗತ ಸಮಿತಿ ರಚನೆ, ಲೆಕ್ಕಪತ್ರ ಮಂಡನೆಯಾಗದೆ ಹಾಗೂ ಸರ್ಕಾರದಿಂದ ಅನುದಾನ ಖಾತ್ರಿಯಾಗದೇ ಯಾವ ವರ್ಷವೂ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ ಉದಾಹರಣೆಗಳಿಲ್ಲ. ಆದರೆ, ಈ ಬಾರಿ ಡಿಸೆಂಬರ್ನಲ್ಲಿ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಆದರೂ, ಸ್ಥಳ, ದಿನಾಂಕ, ಸಮಿತಿಗಳ ಬಗ್ಗೆ ಈ ವರೆಗೆ ಚರ್ಚೆಗಳಾಗಿಲ್ಲ.
ಲೆಕ್ಕ ಪತ್ರಗಳು, ಅನುದಾನದ ವಿಚಾರಗಳು ವಿವಾದಕ್ಕೆ ಗುರಿಯಾಗಿವೆ. ಹೀಗಿರುವಾಗ ಆರು ತಿಂಗಳು ಮೊದಲೇ ಅಧ್ಯಕ್ಷರನ್ನು ಘೋಷಿಸಲು ಕಸಾಪ ಮುಂದಾಗಿದೆ. ಸಂಘದ ಈ ನಡೆಗೆ ಸದಸ್ಯರಿಂದ ಆಕ್ಷೇಪವೂ ವ್ಯಕ್ತವಾಗಿದೆ.
ಸಮ್ಮೇಳನದ ಅಧ್ಯಕ್ಷರ ಆಯ್ಕೆ ಗೌಪ್ಯವಾಗಿ ನಡೆಯುತ್ತಿತ್ತು. ಅಧ್ಯಕ್ಷರು ಯಾರಾಗಬೇಕು ಎಂದು ಈಗಾಗಲೇ ಏಕಪಕ್ಷೀಯವಾಗಿ ನಿರ್ಧಾರವಾಗಿದೆ ಎಂಬ ಗುಲ್ಲು ಇದೆ. ಸದಸ್ಯರ ಬಾಯಲ್ಲಿ ಆ ಹೆಸರು ಹರಿದಾಡುತ್ತಿದೆ.
ಹಲವು ಕಾರಣಗಳಿಂದಾಗಿ ಕಸಾಪ ಮತ್ತು ಅದರ ಅಧ್ಯಕ್ಷರು ಈ ವರ್ಷ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇದೇ ಕಾರಣಕ್ಕೆ ಅಧ್ಯಕ್ಷರಿಗಿದ್ದ ಸಚಿವ ದರ್ಜೆ ಸ್ಥಾನಮಾನ ತೆಗೆಯಲಾಗಿದೆ. ಸಂಘದ ವ್ಯವಹಾರಗಳನ್ನು ತನಿಖೆ ಮಾಡಿಸುವ, ಆಡಳಿತಾಧಿಕಾರಿಯನ್ನು ನೇಮಿಸುವ ಚರ್ಚೆ ನಡೆಯುತ್ತಿದೆ. ಸಮ್ಮೇಳನಾಧ್ಯಕ್ಷರನ್ನು ಬೇಗ ಘೋಷಣೆ ಮಾಡಿದರೆ, ಚರ್ಚೆಗಳು ಹಿನ್ನೆಲೆಗೆ ಸರಿಯುತ್ತವೆ ಎಂಬುದು ಕಸಾಪ ಅಧ್ಯಕ್ಷರ ಇರಾದೆ ಇರುವಂತಿದೆ ಎಂದು ಸಂಘದ ಸದಸ್ಯರೇ ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.