ADVERTISEMENT

ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮ ವಹಿಸಲು ಒತ್ತಾಯ

ಒಂಟಿ ಮಹಿಳೆಯರ ಸಂಘದಿಂದ ಪ್ರತಿಭಟನೆ, ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 3:07 IST
Last Updated 10 ಫೆಬ್ರುವರಿ 2026, 3:07 IST
ಹಗರಿಬೊಮ್ಮನಹಳ್ಳಿಯ ಬಸವೇಶ್ವರ ವೃತ್ತದಲ್ಲಿ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಹಗರಿಬೊಮ್ಮನಹಳ್ಳಿಯ ಬಸವೇಶ್ವರ ವೃತ್ತದಲ್ಲಿ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಪ್ರಜಾವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ: ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಒಂಟಿ ಮಹಿಳೆಯರ ಪುನರ್ವಸತಿ ಮತ್ತು ಸಂರಕ್ಷಣೆಗೆ ಕ್ರಮ ವಹಿಸುವಂತೆ ಒತ್ತಾಯಿಸಿ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಘಟಕದ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ‘ಮಹಿಳೆಯರಲ್ಲಿ ವಿಶೇಷವಾಗಿ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ. ಕೇವಲ ಲಿಂಗ ಮತ್ತು ಜಾತಿ ತಾರತಮ್ಯಕ್ಕೆ ಒಳಗಾಗಿದ್ದು ಮಾತ್ರವಲ್ಲ, ತೀವ್ರ ರೀತಿಯ ಸಾಮಾಹಿಕ ಬಹಿಷ್ಕಾರಕ್ಕೆ ಒಳಗಾಗಿ ಪ್ರತಿನಿತ್ಯವೂ ಅಪಮಾನ ನಿಂದನೆಗಳನ್ನು ಅನುಭವಿಸುತ್ತಿದ್ದಾರೆ’ ಎಂದರು.

ADVERTISEMENT

‘ದಲಿತರನ್ನು ಕೇವಲ ಊರಾಚೆ ಇಟ್ಟು ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ. ಆದರೆ ಒಂಟಿ ಮಹಿಳೆಯರಿಗೆ ಮದುವೆ, ಮರುಮದುವೆ ನಿರಾಕರಿಸಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇವದಾಸಿಯೇತರ ಒಂಟಿ ಮಹಿಳೆಯರನ್ನು ಗಣತಿ ಮಾಡಿ, ದೇವದಾಸಿ ಪುನರ್ವಸತಿ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಕ್ರಮ ವಹಿಸಬೇಕು. ಮಾಸಿಕ ಸಹಾಯಧನ ಕನಿಷ್ಠ ₹ 6 ಸಾವಿರ ನೀಡಬೇಕು’ ಎಂದರು.

‘ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ 18 ತಿಂಗಳು ₹ 10ಸಾವಿರ ವಿಶೇಷ ನೆರವು ನೀಡಬೇಕು. ವೈದ್ಯಕೀಯ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೆಗೌಡ ಮತ್ತು ಉಪ ತಹಶೀಲ್ದಾರ್ ಶಿವಕುಮಾರಗೌಡ ಅವರಿಗೆ ಮನವಿ ಸಲ್ಲಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಹುಲಿಗೆಮ್ಮ, ಕಾರ್ಯದರ್ಶಿ ಚಾಂದ್‍ಬೀ, ಗುರುಶಾಂತಮ್ಮ, ವೀಣಾ, ರೇಣುಕಾ, ಗಂಗಮ್ಮ, ನೇತ್ರಮ್ಮ, ದುರುಗಮ್ಮ, ಜಯಮ್ಮ, ತಳವಾರ ಹುಲಿಗೆಮ್ಮ, ಸಿಐಟಿಯು ಮುಖಂಡ ಎಸ್. ಜಗನ್ನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.