ADVERTISEMENT

ಕುಡಿಯುವ ನೀರಿಗೆ ಬೀದಿಗಿಳಿದ ಜನ

​ಪ್ರಜಾವಾಣಿ ವಾರ್ತೆ
Published 30 ಮೇ 2019, 14:52 IST
Last Updated 30 ಮೇ 2019, 14:52 IST
ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಸಿಪಿಎಂ, ಡಿ.ವೈ.ಎಫ್‌.ಐ.ಕಾರ್ಯಕರ್ತರು ಗುರುವಾರ ಹೊಸಪೇಟೆ ನಗರಸಭೆ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಸಿಪಿಎಂ, ಡಿ.ವೈ.ಎಫ್‌.ಐ.ಕಾರ್ಯಕರ್ತರು ಗುರುವಾರ ಹೊಸಪೇಟೆ ನಗರಸಭೆ ಎದುರು ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ನಗರದ ವಿವಿಧ ಬಡಾವಣೆಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಸಿಪಿಎಂ, ಡಿ.ವೈ.ಎಫ್‌.ಐ. ಕಾರ್ಯಕರ್ತರು ಗುರುವಾರ ಇಲ್ಲಿನ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ, ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದ ‘ಜ್ಯೋತಿಬಸು ನಾಗರಿಕ ಹೋರಾಟ ಸಮಿತಿ’ ಅಧ್ಯಕ್ಷ ಎಂ. ಗೋಪಾಲ, ‘ತುಂಗಭದ್ರಾ ಜಲಾಶಯ ಸಮೀಪದಲ್ಲೇ ಇದ್ದರೂ ನಗರದಲ್ಲಿ ಕುಡಿಯುವ ನೀರಿಗಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಯಾರೊಬ್ಬರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘22 ಮತ್ತು 24ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಜತೆಗೆ ಮಹಿಳೆಯರ ಶೌಚಾಲಯ, ಆಶ್ರಯ ಮನೆ ನಿವೇಶನ, ಮುಖ್ಯರಸ್ತೆ ಅತಿಕ್ರಮಣ ತೆರವಿಗೆ ಆಗ್ರಹಿಸಿ ಈ ಹಿಂದೆಯೂ ಹಲವು ಸಲ ಹೋರಾಟ ನಡೆಸಲಾಗಿದೆ. ಆದರೆ, ಇದುವರೆಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಧೋರಣೆ ಅನುಸರಿಸಿದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕಾರ್ಯದರ್ಶಿಗಳಾದ ಗಣೇಶ, ಎ. ಶಿವಕುಮಾರ, ಜಿಲ್ಲಾ ಮೈನಿಂಗ್‌ ಟ್ರಾನ್ಸ್‌ಪೋರ್ಟ್‌ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಎಂ. ಗೋಪಾಲ್‌, ಪ್ರಧಾನ ಕಾರ್ಯದರ್ಶಿ ಸಿ. ಮಾರುತಿ ಕುಮಾರ್‌, ಡಿ.ವೈ.ಎಫ್‌.ಐ. ಜಿಲ್ಲಾ ಅಧ್ಯಕ್ಷ ಬಿಸಾಟಿ ಮಹೇಶ್‌, ಮುಖಂಡರಾದ ಎನ್‌. ಯಲ್ಲಾಲಿಂಗ, ಕಲ್ಯಾಣಯ್ಯ, ಕೆ. ರಮೇಶ್‌, ಬಂಡೆ ತಿರುಕಪ್ಪ, ಭಾಸ್ಕರ್‌ ರೆಡ್ಡಿ, ಕೆ.ಎಂ. ಸಂತೋಷ್‌ ಕುಮಾರ್‌, ಟಿ. ಶರತ್‌ ಕುಮಾರ್‌, ಮರಡಿ ಜಂಬಯ್ಯ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.