ADVERTISEMENT

ಬಡ ಬಣಜಿಗರಿಗೆ ಮನೆ ಕೊಡಿ: ಅಲ್ಲಂ ವೀರಭದ್ರಪ್ಪ ಅಭಿಪ್ರಾಯ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಂ ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 12:54 IST
Last Updated 2 ಸೆಪ್ಟೆಂಬರ್ 2018, 12:54 IST
ಬಣಜಿಗ ಸಮುದಾಯದ ಸಂಕೇತವಾದ ತಕ್ಕಡಿಗೆ ಹೂ ಸುರಿಯುವ ಮೂಲಕ ಗಣ್ಯರು ಬಳ್ಳಾರಿಯಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಣಜಿಗ ಸಮುದಾಯದ ಸಂಕೇತವಾದ ತಕ್ಕಡಿಗೆ ಹೂ ಸುರಿಯುವ ಮೂಲಕ ಗಣ್ಯರು ಬಳ್ಳಾರಿಯಲ್ಲಿ ಭಾನುವಾರ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.   

ಬಳ್ಳಾರಿ: 'ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಬಣಜಿಗ ಸಮುದಾಯದ ಬಡವರಿಗೆ ಮನೆ ಸೌಕರ್ಯ ಕೊಡಬೇಕು’ ಎಂದು ಶಾಸಕ ಅಲ್ಲಂ ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಬಸವಭವನದಲ್ಲಿ ಭಾನುವಾರ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವ್ಯಾಪಾರ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವ ಬಣಜಿಗ ಸಮುದಾಯದ ಕ್ಷೇಮಾಭಿವೃದ್ಧಿ ಸಂಘವು ಈ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭಿಸಬೇಕು’ ಎಂದರು.

‘ನಗರದಲ್ಲಿ ಒಂದು ನಿವೇಶನ ಖರೀದಿಗೆ ಹಳ್ಳಿಯಲ್ಲಿ ಒಂದು ಎಕರೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಜೀವನ ನಡೆಸುವುದು ದುಬಾರಿಯಾಗಿರುವುದರಿಂದ ಗ್ರಾಮಾಂತರ ಪ್ರದೇಶದ ಬಡಜನರಿಗೆ ಮನೆ ಕಟ್ಟಿಕೊಳ್ಳಲು ಸಹಕಾರ ನೀಡಬೇಕು. ಆಗ ಕ್ಷೇಮಾಭಿವೃದ್ಧಿ ಸಂಘದ ಹೆಸರು ಸಾರ್ಥಕವಾಗುತ್ತದೆ’ ಎಂದರು.

ADVERTISEMENT

ಮುಖಂಡ ಮೃತ್ಯುಂಜಯ ಜಿನಗ ಮಾತನಾಡಿ, ‘ಸಹಕಾರ ಸಂಘದ ಜವಾಬ್ದಾರಿ ಹೊತ್ತವರು ನಿಸ್ವಾರ್ಥ ಕಾರ್ಯ ಮಾಡಿದರೆ ಸಮಾಜದ ಬೆಳವಣಿಗೆಯಾಗುತ್ತದೆ. ಉನ್ನತ ವ್ಯಾಸಂಗಕ್ಕೋಸ್ಕರ ಪರಿತಪಿಸುತ್ತಿರುವ ಬಡ ವಿದ್ಯಾರ್ಥಿಗಳಿಗೆ ಸಹಕಾರ ನೀಡಿ’ ಎಂದು ಹೇಳಿದರು.

ಎಡೆಯೂರು ಸಿದ್ದಲಿಂಗೇಶ್ವರ ಗೃಹ ನಿರ್ಮಾಣ ಸಹಕಾರ ಸಂಘವನ್ನು ಇದೇ ಸಂದರ್ಭದಲ್ಲಿ ಹಾಸನದ ಬಸವಾಪಟ್ಟಣದ ತೋಂಟದಾರ್ಯ ಮಠದ ಬಸವಲಿಂಗ ಶಿವಯೋಗಿ ಸ್ವಾಮಿ ಉದ್ಘಾಟಿಸಿದರು.

ಸಂಡೂರಿನ ವಿರಕ್ತ ಮಠದ ಪ್ರಭುಸ್ವಾಮಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಮೃತ್ಯುಂಜಯ ಜಿನಗ, ಮಹಾಂತೇಶ್, ಬಸವರಾಜ್, ನಾಗರಾಜ್, ಕೆ.ಜಗದೀಶ್ ಇದ್ದರು.

ಇದಕ್ಕೂ ಮುನ್ನ ಕನಕದುರ್ಗಮ್ಮ ದೇವಸ್ಥಾನದಿಂದ ನಡೆದ ಬಸವಾದಿ ಶರಣರ ಭಾವಚಿತ್ರ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಸದಸ್ಯ ಅಲ್ಲಂ ಪ್ರಶಾಂತ್ ಚಾಲನೆ ನೀಡಿದರು.

ಸಂಜೆ ಅಭಿನಯ ಕಲಾಕೇಂದ್ರದವರು ‘ಎಡೆಯೂರು ಸಿದ್ಧಲಿಂಗೇಶ್ವರ; ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.