ಹೂವಿನಹಡಗಲಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಮ.ಮ.ಪಾಟೀಲ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅನುಶ್ರೀ ಬಸವರಾಜ ಅಡವಳ್ಳಿ ಮಠ ಕಲಾ ವಿಭಾಗದಲ್ಲಿ ರಾಜ್ಯ ಮಟ್ಟದ 3ನೇ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ತಾಲ್ಲೂಕಿನ ಇಟ್ಟಿಗಿ ಗ್ರಾಮದ ಪಂಚಮಸಾಲಿ ಪದವಿಪೂರ್ವ ಕಾಲೇಜಿನ ಪಿ.ವೀರೇಶ್ 5ನೇ ಸ್ಥಾನ ಗಳಿಸಿದ್ದಾರೆ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಸೌಮ್ಯ ಪೋಷಣೆಯಲ್ಲಿ ಬೆಳೆದ ಮುದೇನೂರಿನ ಅನುಶ್ರೀ 594 (ಶೇ 99) ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ಐಚ್ಛಿಕ ಕನ್ನಡ, ಶಿಕ್ಷಣ ಶಾಸ್ತ್ರದಲ್ಲಿ ಶೇ 100 ಪೂರ್ಣ ಅಂಕ ಪಡೆದಿದ್ದಾರೆ. ಬೇಸಿಕ್ ಕನ್ನಡ, ಇತಿಹಾಸದಲ್ಲಿ 99, ಸಂಸ್ಕೃತ, ರಾಜ್ಯ ಶಾಸ್ತ್ರದಲ್ಲಿ 98 ಅಂಕ ಗಳಿಸಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕು ಕನ್ನಿಹಳ್ಳಿಯ ಪಿ. ವೀರೇಶ್ ಕಲಾ ವಿಭಾಗದಲ್ಲಿ 592 (ಶೇ 98.66) ಅಂಕ ಪಡೆದಿದ್ದಾರೆ. ಇಬ್ಬರು ಗ್ರಾಮೀಣ ವಿದ್ಯಾರ್ಥಿಗಳು ಕೂಲಿಕಾರ್ಮಿಕರ ಮಕ್ಕಳಾಗಿದ್ದು, ಬಡತನದಲ್ಲಿ ಅರಳಿದ ಪ್ರತಿಭೆಗಳಾಗಿದ್ದಾರೆ.
‘ಮೊದಲ ರ್ಯಾಂಕ್ ನಿರೀಕ್ಷಿಸಿದ್ದೆ. ಆದರೆ ಮೂರನೇ ಟಾಪರ್ ಆಗಿರುವುದು ಸಂತಸ ತಂದಿದೆ. ತಾಯಿ ಮತ್ತು ಕುಟುಂಬದವರ ಸಹಕಾರ, ನಮ್ಮ ಕಾಲೇಜಿನ ಬೋಧಕ ಸಿಬ್ಬಂದಿಯ ಮಾರ್ಗದರ್ಶನ ನನ್ನ ಸಾಧನೆಗೆ ಕಾರಣ’ ಎಂದು ವೀರೇಶ್ ತಿಳಿಸಿದರು.
‘ಕೆಎಎಸ್ ಅಧಿಕಾರಿಯಾಗಬೇಕೆಂಬ ಗುರಿ ಇದ್ದು, ಪದವಿ ಓದುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವೆ. ಸಮಯ ವ್ಯರ್ಥ ಮಾಡದೇ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಎಲ್ಲರೂ ಸಾಧನೆ ಮಾಡಬಹುದು’ ಎಂದು ಟಾಪರ್ ವಿದ್ಯಾರ್ಥಿನಿ ಅನುಶ್ರೀ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.