ರಾಬಕೊವಿ
ಬಳ್ಳಾರಿ: ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ’ಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಮೇಯವೇ ಇಲ್ಲ ಎಂದು ಸಹಕಾರ ಸಚಿವ ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರ ಮುಗಿದಿರುವುದರಿಂದ ಮೆಗಾ ಡೇರಿಗೆ ಜಾಗ ಖರೀದಿ ಮಾಡಲು ಹಣ ನೀಡಲು ಆಗುತ್ತಿಲ್ಲ. ರೈತರಿಗೆ ಬಿಲ್ಲು, ಸಹಾಯಧನ ನೀಡಲು ಸಮಸ್ಯೆಯಾಗುತ್ತಿದೆ. ಕೂಡಲೇ ರಾಬಕೊವಿಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದಕ್ಕೆ ಉತ್ತರಿಸಿರುವ ಸಹಕಾರ ಸಚಿವ ರಾಜಣ್ಣ, ರಾಬಕೊವಿ ಹಾಲು ಒಕ್ಕೂಟದ ಮೆಗಾಡೈರಿಗಾಗಿ ಕೊಳಗಲ್ಲು ಗ್ರಾಮದಲ್ಲಿ 15 ಎಕರೆ ಜಮೀನನ್ನು ಬಳ್ಳಾರಿ ಜಿಲ್ಲಾಧಿಕಾರಿ 2024ರ ಜೂನ್ 29ರಂದು ಮಂಜೂರು ಮಾಡಿದ್ದು, ₹2,92,01,070 ಮೊತ್ತ ಪಾವತಿಸಲು ತಿಳಿಸಿದ್ದಾರೆ. ಆ.29ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಜಮೀನಿನ ದರವನ್ನು ಕಡಿಮೆಗೊಳಿಸುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭಾಧ್ಯಕ್ಷರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಆಡಳಿತ ಮಂಡಳಿಗಳಿಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವವರೆಗೆ ಹಾಲಿ ಇರುವ ಆಡಳಿತ ಮಂಡಳಿಯೇ ಮುಂದುವರೆಯತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ. ಹೀಗಾಗಿ ರಾಬಕೊವಿ ಹಾಲು ಒಕ್ಕೂಟಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.