ADVERTISEMENT

ರೆಫಲ್ ಹಗರಣವನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಲಿ: ಸಂಸದ ವಿ.ಎಸ್. ಉಗ್ರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 8:51 IST
Last Updated 17 ಡಿಸೆಂಬರ್ 2018, 8:51 IST
   

ಕೂಡ್ಲಿಗಿ:‘ರೆಫೆಲ್ ಹಗರಣ ತನಿಖೆಯನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು’ಎಂದು ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಭಾನುವಾರ ರಾತ್ರಿ ತಾಲ್ಲೂಕಿನ ಕಾನಾಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ದೇಶದ ಇತಿಹಾಸದಲ್ಲಿ ರೆಫಲ್ ಖರೀದಿ ಹಗರಣ ಅತಿ ದೊಡ್ಡ ಭ್ರಷ್ಟಾಚಾರದ ಹಗರಣವಾಗಿದೆ. ವಾಯು ಸೇನೆಗೆ ಅಧುನಿಕ ಯುದ್ಧ ವಿಮಾನಗಳ ಬೇಕುಎಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಸರ್ಕಾರ 2001ರಲ್ಲಿ ವಿಮಾನ ಖರೀದಿ ಮಾಡಲು ನಿರ್ಧಾರ ಮಾಡಿತ್ತು. ನಂತರಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಪ್ರತಿ ವಿಮಾನಕ್ಕೆ ₹625 ಕೋಟಿ ದರದಲ್ಲಿ 126 ರೆಫಲ್ ಯುದ್ದ ವಿಮಾನಗಳನ್ನು ರೆಸಲ್ ಕಂಪನಿಯಿಂದ ಖರೀದಿ ಮಾಡಲು ನಿರ್ಧಾರ ಮಾಡಿ, ಪ್ರಾರಂಭದಲ್ಲಿ ಕೆಲವು ವಿಮಾನಗಳನ್ನು ಫ್ರಾನ್ಸ್ ನಿಂದ ಖರೀದಿ ಮಾಡಿ, ನಂತರ ಅದೇ ಕಂಪನಿ ಸಹಯೋಗದೊಂದಿಗೆ ಬೆಂಗಳೂರಿನ ಎಚ್‍ಎಎಲ್‍ನಿಂದ 108 ವಿಮಾನಗಳನ್ನು ತಯಾರಿಸಲು ತೀರ್ಮಾನ ಮಾಡಲಾಗಿತ್ತು. ಆದರೆ 2015-16ರಲ್ಲಿ ಮೋದಿ 126 ವಿಮಾನ ಬೇಡ ಎಂದು ಹೇಳಿದ್ದು, ಏಕೆ ಬೇಡ ಎಂದರು ಎಂದು ಇಂದಿಗೂ ಅವರು ಬಾಯಿ ಬಿಟ್ಟಿಲ್ಲ‘ ಎಂದು ಆರೋಪಿಸಿದರು.

ADVERTISEMENT

‘ಬೆಂಗಳೂರಿನ ಎಚ್‍ಎಎಲ್ ಮೂಲಕ ವಿಮಾನ ತಯಾರಿಸಿದ್ದರೆ ಕರ್ನಾಟಕದ ಎಂಜಿನಿಯರುಗಳಿಗೆ, ಡಿಪ್ಲೊಮ ಪದವಿದರರಿಗೆ ಉದ್ಯೋಗ ಸಿಗುತ್ತಿತ್ತು. ಇದನ್ನು ತಪ್ಪಿಸಿ ಅಂಬಾನಿ ಕುಟುಂಬಕ್ಕೆ ಸಹಾಯ ಮಾಡಲು ಮೋದಿ ಮುಂದಾಗಿದ್ದಾರೆ. ಇದರಿಂದ ಸುಮಾರು 39 ಸಾವಿರ ಕೋಟಿ ರೂಪಾಯಿ ಕಿಕ್ ಬ್ಯಾಕ್ ಅಗಿದೆ’ಎಂದು ದೂರಿದರು.

‘ಯುದ್ದ ವಿಮಾನಗಳ ದರದ ವ್ಯತ್ಯಾಸಕ್ಕೂ ಕೋರ್ಟಿಗೂ ಸಂಬಂಧವಿಲ್ಲ. ಇದು ಕೇಂದ್ರ ಸರ್ಕಾರದ ಕರ್ತವ್ಯವಾಗಿದ್ದು, ಈ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ’ಎಂದು ಸುಪ್ರೀಂ ಕೋರ್ಟ್ ಅದೇಶದಲ್ಲಿ ಹೇಳಿದೆ.

‘ಈ ವಿಚಾರ ಸಿಎಜಿ ವರದಿಯಲ್ಲಿ ಪ್ರಸ್ತಾಪ ವಾಗಿದೆ. ಸುಪ್ರೀಂ ಕೋರ್ಟಿಗೆ ಹಾಗೂ ಸಂಸತ್ತಿಗೆ ತಪ್ಪು ಮಾಹಿತಿ ನೀಡುವ ಮೂಲಕ ಕೋರ್ಟ್ ನಿಂದನೆ ಹಾಗೂ ಸದನದ ಹಕ್ಕು ಚ್ಯುತಿ ಮಾಡಿದ್ದಾರೆ. ಅದ್ದರಿಂದ ರೆಫಲ್ ಹಗರಣವನ್ನು ತಕ್ಷಣ ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು’ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.