ಹೊಸಪೇಟೆ(ವಿಜಯನಗರ): ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ರ್ಯಾಂಕ ಗಳಿಸಿದ ಇಲ್ಲಿನ ವಿಜಯನಗರ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳನ್ನು ಗುರುವಾರ ಸನ್ಮಾನಿಸಲಾಯಿತು.
ಎಂಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಮೊಹಮ್ಮದ್ ಅಸ್ಲಂ, ಎಂಎ ಅರ್ಥಶಾಸ್ತ್ರದಲ್ಲಿ ಮೊದಲ ರ್ಯಾಂಕ್ ಗಳಿಸಿದ ಷಾ ತಾಹೀರಾ ಬಾನು, ತೃತೀಯ ರ್ಯಾಂಕ್ ಪಡೆದ ಮಹಾನಂದ ಮಲ್ಲಿಕಾರ್ಜುನ, ಎಂ.ಕಾಂನಲ್ಲಿ ಪ್ರಥಮ ರ್ಯಾಂಕ್ ಪಡೆದ ಎ.ಜಿ. ಶ್ರೀನಾಗ್, ತೃತೀಯ ರ್ಯಾಂಕ್ ಗಳಿಸಿದ ಜಿ. ಸ್ನೇಹಾ, ನಾಲ್ಕನೇ ರ್ಯಾಂಕ್ ಪಡೆದ ಎಂ. ರಚನಾ, ಎಂಎಸ್ಸಿ ಭೌತಶಾಸ್ತ್ರದಲ್ಲಿ ದ್ವಿತೀಯ ರ್ಯಾಂಕ್ ಪಡೆದ ಭವಾನಿ ಬೆಟ್ಟದೂರು, ತೃತೀಯ ರ್ಯಾಂಕ್ ಗಳಿಸಿದ ತೆಲಗಿ ರಾಮಯ್ಯ ಅವರನ್ನು ಸತ್ಕರಿಸಲಾಯಿತು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚಿತ್ತವಾಡ್ಗಿ ಪೊಲೀಸ್ ಠಾಣೆ ಸಿಪಿಐ ಜಯಪ್ರಕಾಶ್, ‘ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದ ಸಮಯ ಬಹಳ ಪ್ರಮುಖವಾದದ್ದು. ಅದನ್ನು ವ್ಯರ್ಥ ಮಾಡಬಾರದು. ಓದಿನ ಬಗ್ಗೆ ಹೆಚ್ಚು ಗಮನಹರಿಸಬೇಕು. ನಾನು ಕೂಡ ಇದೇ ಕಾಲೇಜಿನಲ್ಲಿ ಓದಿ ಬೆಳೆದವನು’ ಎಂದು ಹಳೆಯ ದಿನ ಮೆಲುಕು ಹಾಕಿದರು.
ಕಾಲೇಜಿನ ಇನ್ನೊಬ್ಬ ಹಳೆಯ ವಿದ್ಯಾರ್ಥಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ, ‘ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಐಎಎಸ್, ಐಪಿಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಬೇಕು’ ಎಂದರು.
ನಂದಿಪುರದ ಮಹೇಶ್ವರ ಸ್ವಾಮೀಜಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ನಾಗರಾಜ್, ಪ್ರಾಂಶುಪಾಲ ವಿ.ಎಸ್.ಪ್ರಭಯ್ಯ, ಪ್ರಾಧ್ಯಾಪಕರಾದ ಮೃತ್ಯುಂಜಯ ರುಮಾಲೆ, ನಿರಂಜನ್, ಲೇಖಕ ಎಸ್.ವಿ. ಪಾಟೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.