ಹೊಸಪೇಟೆ: ‘ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನದ ಮಹತ್ವ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆಯನ್ನುಗಣರಾಜ್ಯೋತ್ಸವ ದಿನದಂದು ನಡೆಸಬೇಕು’ ಎಂದು ಹಿಂದುಳಿದ ವರ್ಗಗಳ ಮುಖಂಡ ವೈ. ಯಮುನೇಶ್ ಆಗ್ರಹಿಸಿದರು.
ಗಣರಾಜ್ಯೋತ್ಸವ ಆಚರಣೆ ಕುರಿತು ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸ್ತಬ್ಧಚಿತ್ರಗಳ ಮೆರವಣಿಗೆ ಬೆಂಗಳೂರು, ನವದೆಹಲಿಗೆ ಸೀಮಿತವಾಗಿದೆ. ಅದು ನಮ್ಮಲ್ಲೂ ಮಾಡಬೇಕು. ಒಟ್ಟಾರೆ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಆಚರಿಸುವುದರ ಜತೆಗೆ, ಜನತೆಯಲ್ಲಿ ಸಂವಿಧಾನದ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು’ ಎಂದು ಹೇಳಿದರು.
ತಹಶೀಲ್ದಾರ್ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿ, ‘ಈ ಕುರಿತು ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಕಾರ್ಯಕ್ರಮ ನಡೆಯುವ ಮುನ್ಸಿಪಲ್ ಮೈದಾನದಲ್ಲಿ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರ ಭಾವಚಿತ್ರಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.
‘ಜ. 26ರಂದು ಬೆಳಿಗ್ಗೆ 8ಕ್ಕೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ಆಕರ್ಷಿಕ ಪಥಸಂಚಲನ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್,ಪ್ರೊಬೇಷನರಿ ತಹಶೀಲ್ದಾರ್ ಶರಣಮ್ಮ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ, ಸಿ.ಪಿ.ಐ. ಸಿದ್ದೇಶ್ವರ, ಮುಖಂಡರಾದ ಪರಶುರಾಮ, ಪಾಂಡುರಂಗ ಹವಾಲ್ದಾರ, ತಾಯಪ್ಪ ನಾಯಕ, ಎಲ್. ಮಂಜುನಾಥ, ಚಂದ್ರಪ್ಪ, ನಾಗರಾಜ ಪತ್ತಾರ, ಬಿ.ಟಿ. ಮಂಜುನಾಥ, ಮಾ.ಬ. ಸೋಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.