ಬಳ್ಳಾರಿ: ‘ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮತ್ತು ನನ್ನ ನಡುವೆ ನಡೆದಘಟನೆಅತಿ ಚಿಕ್ಕದು. ಆದರೆ ಕಾಣದ ಕೈವಾಡದಿಂದಾಗಿ ದೊಡ್ಡದಾಗಿ ಬಿಂಬಿತವಾಗಿದೆ’ ಎಂದು ಆನಂದ್ಸಿಂಗ್ ಮೇಲಿನ ಹಲ್ಲೆ ಆರೋಪಿ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪ್ರತಿಪಾದಿಸಿದರು.
ನಗರದಲ್ಲಿ ಶನಿವಾರ ಕೆಪಿಸಿಸಿ ಉಪಾಧ್ಯಕ್ಷ ಎನ್.ಸೂರಾರ್ಯನಾರಾಯಣ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟನೆಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆ ಇರಲಿಲ್ಲ. ಆದರೆ, ಕಾಣದ ಕೈಯೊಂದು ನಮ್ಮ ಮಧ್ಯೆ ಕೆಲಸ ಮಾಡಿದ್ದರಿಂದ ಆ ವಿಚಾರ ದೊಡ್ಡದಾಗಿದೆ. ಘಟನೆ ಸಂಬಂಧ ಶಾಸಕ ಎಲ್ಬಿಪಿ ಭೀಮಾನಾಯ್ಕ ಅವರ ಪಾತ್ರದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಅದಕ್ಕೆ ಕಾನೂನು ತೊಡಕುಗಳಿವೆ’ ಎಂದರು.
‘ರೆಡ್ಡಿ ಶಾಸಕರಾಗಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಲಹೆ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಅವರಿಗೆ ಸ್ಥಾನ–ಮಾನ ನೀಡುವಂತೆ ಪಕ್ಷದ ಮುಖಂಡರಿಗೆ ಒತ್ತಾಯಿಸುತ್ತೇನೆ’ ಎಂದರು.
‘ಗಣೇಶ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತ್ತು ಮಾಡಿರುವ ಆದೇಶವನ್ನು ವಾಪಸ್ಸು ಪಡೆಯುಂತೆ ಹಾಗೂ ಆನಂದ್ ಸಿಂಗ್ ಜೊತೆ ಸಂಧಾನ ಮಾಡುವಂತೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಂಸದ ವಿ.ಎಸ್. ಉಗ್ರಪ್ಪ ಅವರ ಗಮನ ಸೆಳೆಯುವೆ’ ಎಂದು ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.