ADVERTISEMENT

ಅಕ್ಕಿ ದಂಧೆ ಅಂಕುಶಕ್ಕೆ ಸೂಚನೆ

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಕಟ್ಟಪ್ಪಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 5:03 IST
Last Updated 30 ಸೆಪ್ಟೆಂಬರ್ 2025, 5:03 IST
ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಪ್ರಜಾವಾಣಿ ವರದಿಯನ್ನು ಪ್ರದರ್ಶಿಸಿದ ಸಚಿವ ಬಿ.ಝಡ್‌ ಜಮೀರ್‌ ಅಹಮದ್‌. ಶಾಸಕ ನಾಗೇಂದ್ರ, ಜೆ.ಎನ್‌ ಗಣೇಶ್‌, ಬಿ.ಎಂ ನಾಗರಾಜು ಇದ್ದರು. 
ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಪ್ರಜಾವಾಣಿ ವರದಿಯನ್ನು ಪ್ರದರ್ಶಿಸಿದ ಸಚಿವ ಬಿ.ಝಡ್‌ ಜಮೀರ್‌ ಅಹಮದ್‌. ಶಾಸಕ ನಾಗೇಂದ್ರ, ಜೆ.ಎನ್‌ ಗಣೇಶ್‌, ಬಿ.ಎಂ ನಾಗರಾಜು ಇದ್ದರು.    

ಬಳ್ಳಾರಿ: ಅನ್ನಭಾಗ್ಯ ಅಕ್ಕಿಯ ಅಕ್ರಮ ಸಂಗ್ರಹ, ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್‌ ಜಮೀರ್ ಅಹಮದ್‌ ಖಾನ್‌ ಅಧಿಕಾರಿಗಳಿಗೆ ಕಟ್ಟಪ್ಪಣೆ ವಿಧಿಸಿದರು. 

ಬಳ್ಳಾರಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ‘ಬಳ್ಳಾರಿಯಲ್ಲಿ ಅನ್ನಭಾಗ್ಯ ಅಕ್ಕಿ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿರುವ ಆರೋಪಗಳಿವೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು. ನ್ಯಾಯಬೆಲೆ ಅಂಗಡಿಗಳ ಹಂತದಲ್ಲೇ ಇದನ್ನು ತಡೆಯಬೇಕು ಎಂದು ಸೂಚಿಸಿದರು. ಈ ವೇಳೆ ಅವರು ‘ಪ್ರಜಾವಾಣಿ’ಯ ವರದಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿದರು.   

ಗೃಹ ಜ್ಯೋತಿ ಅಡಿಯಲ್ಲಿ ಹೊಸ ಸಂಪರ್ಕ ಪಡೆಯಲು ಜನ ಉತ್ಸುಕರಾಗಿದ್ದಾರೆ. ಆದರೆ, ಅವರಿಗೆ ಮೀಟರ್‌ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಚಿದಾನಂದಪ್ಪ ಸಚಿವರ ಗಮನಕ್ಕೆ ತಂದರು. ಮೀಟರ್‌ ಅಳವಡಿಕೆ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಸರ್ಕಾರ ಸೂಚಿಸಿರುವ ಶುಲ್ಕ ಮೀರಿ ಹೆಚ್ಚಿನ ಹಣ ವಸೂಲಿ ಮಾಡಬಾರದು. ಬಿಲ್‌ ಬಾಕಿ ಉಳಿಸಿಕೊಂಡಿರುವವರ ಸಂಪರ್ಕ ಕಡಿತಗೊಳಿಸಬಾರದು. ಬಾಕಿ ಮೇಲಿನ ಬಡ್ಡಿ ಮನ್ನಾ ಮಾಡಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಸಿಎಂ ಜತೆ ಚರ್ಚಿಸಲಾಗುವುದು ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು. 

ADVERTISEMENT

ಅಮಾನತಿಗೆ ಸೂಚನೆ: ಜಿಲ್ಲೆಯಲ್ಲಿ ಸಾರಿಗೆ ಸೇವೆಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬಂದಿವೆ ಎಂದ ಸಚಿವ ಜಮೀರ್‌ ಈ ಕುರಿತು ಮಾಹಿತಿಗಾಗಿ ಕೆಕೆಆರ್‌ಟಿಸಿ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಯಿಂದ ಮಾಹಿತಿ ಕೇಳಿದರು. ಆದರೆ, ಡಿಸಿ ಸಭೆಗೆ ಬಂದಿರಲಿಲ್ಲ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಡಿಸಿಯನ್ನು ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಬೆಳೆ ವಿಮೆ ಜಾಗೃತಿಗೆ ಸೂಚನೆ: ಜಿಲ್ಲೆಯಲ್ಲಿ ಬೆಳೆ ವಿಮೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಬೆಳೆ ವಿಮೆಯಲ್ಲೂ ದಂಧೆ ಇದೆ. ಇದರ ಬಗ್ಗೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಜಮೀರ್‌, ಶಾಸಕರಾದ ನಾಗೇಂದ್ರ ಮತ್ತು ಜೆ.ಎನ್‌ ಗಣೇಶ್‌  ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ಅವರಿಗೆ ಸೂಚಿಸಿದರು. 

ಪಾಲಿಕೆಗೆ ಜಾಗ ಕೊಡಿ: ಬಳ್ಳಾರಿ ಮಹಾನಗರ ಪಾಲಿಕೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರಿನ ಜಾಗ ಮಂಜೂರು ಮಾಡುವಂತೆ ಶಾಸಕ ಬಿ. ನಾಗೇಂದ್ರ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಅವರಿಗೆ ತಿಳಿಸಿದರು. 

ಸಿರುಗುಪ್ಪ ನಗರಸಭೆಗೂ ಸೂಕ್ತ ಜಾಗ ಒದಗಿಸಿಕೊಡುವಂತೆ ಶಾಸಕ ಬಿ.ಎಂ ನಾಗರಾಜು ಮನವಿ ಮಾಡಿದರು. 

ಬಳ್ಳಾರಿ ಹೊರವಲಯದ ಕಸದ ಡಂಪಿಂಗ್ ಯಾರ್ಡ್ ವಿವಾದ ನ್ಯಾಯಾಲಯದಲ್ಲಿರುವ ಬಗ್ಗೆ ಸಚಿವ ಜಮೀರ್‌ ಅಹಮದ್‌ ಪಾಲಿಕೆ ಆಯುಕ್ತರಿಂದ ಮಾಹಿತಿ ಪಡೆದರು. ನ್ಯಾಯಾಂಗ ಹೋರಾಟಕ್ಕೆ ತಾವು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಪಾಲಿಕೆಯ ವಕೀಲರ ಕಾರ್ಯವೈಖರಿ ಬಗ್ಗೆ ಶಾಸಕ ನಾರಾ ಭರತ್‌ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. 

ಜನರಿಗೆ ಧೈರ್ಯ ತುಂಬಿ: ಬಾಣಂತಿಯರ ಸಾವು ಘಟನೆಗಳ ಬಳಿಕ ಜಿಲ್ಲಾಸ್ಪತ್ರೆ, ಬಿಎಂಸಿಆರ್‌ಸಿ (ವಿಮ್ಸ್‌)ಗೆ  ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಸಚಿವ ಜಮೀರ್‌ ಅಹಮದ್‌ ಖಾನ್‌ ಆತಂಕ ವ್ಯಕ್ತಪಡಿಸಿದರು. ಉತ್ತಮ ಸೇವೆ ಮೂಲಕ ಜನರಲ್ಲಿ ಧೈರ್ಯ ತುಂಬುವಂತೆ ಅವರು ತಾಕೀತು ಮಾಡಿದರು. ಸಭೆಗೆ ಬಾರದ  ವಿಮ್ಸ್‌ ನಿರ್ದೇಶಕ ಗಂಗಾಧರ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‌

‌ಕಂಪ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಮತ್ತು ನರ್ಸ್‌ ಅನ್ನು ಅಮಾನತು ಮಾಡುವಂತೆ ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು. 

ಈಗ ಸಂತೋಷನಾ? : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಳ್ಳಾರಿ ಕಳೆದ ವರ್ಷ 28ನೇ ಸ್ಥಾನದಲ್ಲಿತ್ತು. ಈ ವರ್ಷ 29ಕ್ಕೆ ಕುಸಿದಿದೆ. ನಿಮಗೆ ಈಗ ಸಂತೋಷನಾ ಎಂದು ಜಮೀರ್‌ ಶಿಕ್ಷಣ ಇಲಾಖೆ ಉಪ ನಿರ್ದೇಶಕರನ್ನು ಪ್ರಶ್ನೆ ಮಾಡಿದರು. 

ಡಿಎಂಎಫ್‌ ನಿರ್ಧಾರ ಮಾಡಿ: ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಮೂರು ವರ್ಷಗಳಿಂದ ಹಣ ಬಿಡುಗಡೆಯಾಗಿಲ್ಲ. ಈ ಬಾರಿಯಾದರೂ ಸೂಕ್ತ ನಿರ್ಧಾರ ಕೈಗೊಂಡು ಎಲ್ಲ ತಾಲೂಕುಗಳಿಗೆ ಡಿಎಂಎಫ್‌ ಹಣ ಸಿಗುವಂತೆ ಮಾಡಬೇಕು ಎಂದು ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಒತ್ತಾಯಿಸಿದರು. 

- ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗಬೇಕು

ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಪೂರ್ವಕವಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಕಡಿತಗೊಳಿಸಲಾಗಿದೆ ಎಂದು ಶಾಸಕ ಬಿ. ನಾಗೇಂದ್ರ ರಾಬಕೊವಿ ವ್ಯವಸ್ಥಾಪ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಬಳ್ಳಾರಿಯಲ್ಲಿ ಒಂದು ಲಕ್ಷ ಲೀಟರ್‌ ಹಾಲು ಉತ್ಪಾದನೆಗೆ ಗುರಿಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸಂಘಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು. 

ಬಂದು ಹೋದ ತುಕಾರಾಂ ದಂಪತಿ 

ಮಧ್ಯಾಹ್ನ 2.15ಕ್ಕೆ ಕೆಡಿಪಿ ಸಭೆ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ 5 ಗಂಟೆಗೆ ಆರಂಭವಾಯಿತು. 4.45ರ ಹೊತ್ತಿಗೆ ಸಭೆ ನಡೆಯುವ ಸ್ಥಳಕ್ಕೆ ಸಂಸದ ತುಕಾರಾಂ ಮತ್ತು ಶಾಸಕಿ ಅನ್ನಪೂರ್ಣ ಬಂದರಾದರೂ ಸಚಿವರು ಬಾರದೆ ಇರುವುದನ್ನು ಕಂಡು ಹಿಂದಿರುಗಿರುದಿರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.