
ಬಳ್ಳಾರಿ: ವಾಣಿಜ್ಯ ಮತ್ತು ಕೈಗಾರಿಕಾ (ಸಿ ಆ್ಯಂಡ್ ಐ) (ಗಣಿ) ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಕಳೆದ ಡಿಸೆಂಬರ್ನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಂಡಿದ್ದ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ, ಅವರ ಇಲಾಖೆಯಿಂದ ಪತ್ರಿಕಾ ಹೇಳಿಕೆಯೊಂದನ್ನು ಉತ್ತರವಾಗಿ ನೀಡಲಾಗಿದೆ.
ರೋಹಿಣಿ ಅವರು ಡಿ.25ರಿಂದ 27ರ ವರೆಗೆ ಬಳ್ಳಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಖಾಸಗಿ ಕಂಪನಿಗಳ ಆತಿಥ್ಯ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘಟನೆಗಳು ಪ್ರವಾಸದ ವೇಳೆಯಲ್ಲೇ ಪ್ರತಿಭಟನೆಯನ್ನೂ ಮಾಡಿದ್ದವು.
ಆ ಬಳಿಕ, ರೋಹಿಣಿ ಅವರ ಪ್ರವಾಸಕ್ಕೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ಸಂಡೂರಿನ ರೈತ ಈರಣ್ಣ ಎಂಬುವವರು ಮಾಹಿತಿ ಹಕ್ಕು ಕಾಯ್ದೆ ಅಡಿ ಸಿ ಆ್ಯಂಡ್ ಐ (ಗಣಿ) ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಇಲಾಖೆ, ‘ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಪ್ರವಾಸದ ಕುರಿತ ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿ ಜಿಲ್ಲೆಯ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ. ಅವರು ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆಯನ್ನೇ ಉತ್ತರವಾಗಿ ನೀಡಲು ನಿರ್ದೇಶನವಾಗಿದೆ’ ಎಂದು ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ರೋಹಿಣಿ ಅವರು ಬಳ್ಳಾರಿಯಲ್ಲಿ ಕೈಗೊಂಡಿದ್ದ ಅಧಿಕೃತ ಪ್ರವಾಸ ವಿವಾದಕ್ಕೆ ಗುರಿಯಾಗಿತ್ತು. ಸರ್ಕಾರಿ ಅತಿಥಿಗೃಹ ಕಾಯ್ದಿರಿಸಿಯೂ ಅವರು ಖಾಸಗಿ ಕಂಪನಿಯೊಂದರ ಆತಿಥ್ಯ ಪಡೆದುಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿಯಾಗುತ್ತಲೇ ತಮ್ಮ ಅಧೀನ ಅಧಿಕಾರಿಯೂ ಆದ, ಗಣಿ ಇಲಾಖೆ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ ಅವರಿಂದ ಡಿ. 31ರಂದು ಪತ್ರಿಕಾ ಹೇಳಿಯೊಂದನ್ನು ಬಿಡುಗಡೆ ಮಾಡಿಸಿದ್ದ ರೋಹಿಣಿ, ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.