ADVERTISEMENT

ಹೂವಿನಹಡಗಲಿ: ಮೆಕ್ಕೆಜೋಳ ಪಿಡಿಪಿಎಸ್ ಬೆಳೆ ನೋಂದಣಿಗೆ ನೂಕು ನುಗ್ಗಲು

ಪಿಡಿಪಿಎಸ್ ನೋಂದಣಿಗೆ ಕೊನೆ ದಿನ ಇಂದು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 6:53 IST
Last Updated 13 ಫೆಬ್ರುವರಿ 2026, 6:53 IST
ಹೂವಿನಹಡಗಲಿ ಎಪಿಎಂಸಿಯಲ್ಲಿ ಮೆಕ್ಕೆಜೋಳ ಬೆಳೆ ನೋಂದಣಿಗೆ ರೈತರು ಜಮಾಯಿಸಿದ್ದರು
ಹೂವಿನಹಡಗಲಿ ಎಪಿಎಂಸಿಯಲ್ಲಿ ಮೆಕ್ಕೆಜೋಳ ಬೆಳೆ ನೋಂದಣಿಗೆ ರೈತರು ಜಮಾಯಿಸಿದ್ದರು   

ಹೂವಿನಹಡಗಲಿ: ಪಟ್ಟಣದ ಎಪಿಎಂಸಿಯಲ್ಲಿ ಪಿಡಿಪಿಎಸ್ (ಬೆಲೆ ವ್ಯತ್ಯಾಸದ ಪಾವತಿ ಯೋಜನೆ) ಅಡಿ ಮೆಕ್ಕೆಜೋಳ ಖರೀದಿ ನೋಂದಣಿ ಕೇಂದ್ರದ ಮುಂದೆ ಗುರುವಾರ ನೂಕು ನುಗ್ಗಲು ಉಂಟಾಗಿತ್ತು.

ಪಿಡಿಪಿಎಸ್ ಅಡಿ ಬೆಳೆ ನೋಂದಣಿಗೆ ಫೆ.13 ಕೊನೆಯ ದಿನವಾಗಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಕೇಂದ್ರದ ಮುಂದೆ ಜಮಾಯಿಸಿ, ನೋಂದಣಿಗೆ ಮುಗಿಬಿದ್ದಿದ್ದರು.

ಎಪಿಎಂಸಿಯಲ್ಲಿ ತೆರೆದಿರುವ ಪಿಡಿಪಿಎಸ್ ಕೇಂದ್ರದಲ್ಲಿ ರೈತರು ಬೆರಳಚ್ಚು ನೀಡಿ, ಆಧಾರ್ ಸಂಖ್ಯೆ ಜೋಡಣೆಯಾಗಿರುವ ಪಹಣಿ, ಪಾಸ್ ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಜಿಪಿಎಸ್ ಆಧಾರಿತ ಬೆಳೆ ಮಾಹಿತಿ ದಾಖಲಿಸಿ, ನಂತರ ಬೆಳೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಮಾರಾಟಕ್ಕೆ ತರಬೇಕು ಎಂಬ ನಿಯಮವಿದೆ.

ADVERTISEMENT

‘ತಾಲ್ಲೂಕಿನಲ್ಲಿ ಪಿಡಿಪಿಎಸ್ ಯೋಜನೆ ಜಾರಿಗೊ ಮುನ್ನವೇ ಶೇ 80ರಷ್ಟು ಮೆಕ್ಕೆಜೋಳ ಫಸಲನ್ನು ರೈತರು ಮಾರಾಟ ಮಾಡಿದ್ದಾರೆ. ನಂತರ ಜಾರಿಯಾದ ಈ ಯೋಜನೆಯ ಲಾಭ ಪಡೆಯಲು ಮಾರಾಟ ರಸೀದಿ ಸಲ್ಲಿಸುವುದು ಕಡ್ಡಾಯವಿದ್ದು, ಖರೀದಿದಾರರು ತಾವು ಹಿಂದೆ ಖರೀದಿಸಿದ್ದ ಫಸಲಿಗೆ ರಸೀದಿ ನೀಡಲು ಮಾರುಕಟ್ಟೆ ಶುಲ್ಕ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ‘ಎಪಿಎಂಸಿ ಅಧಿಕಾರಿಗಳಿಗೆ ಎಲ್ಲ ತಿಳಿದಿದ್ದರೂ ಏನೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ರೈತರು ದೂರಿದ್ದಾರೆ.

ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಪಿಡಿಪಿಎಸ್ ಯೋಜನೆಯಿಂದ ಅನುಕೂಲವಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಅನಗತ್ಯ ಗೊಂದಲಗಳಿಂದ ನಿರಾಸೆಯಾಗಿದೆ. ಸರ್ಕಾರ ಗೊಂದಲ ನಿವಾರಿಸಿ, ಬೆಲೆ ವ್ಯತ್ಯಾಸದ ಹಣವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

‘ಪಿಡಿಪಿಎಸ್ ಅಡಿ ಮೆಕ್ಕೆಜೋಳ ಬೆಳೆ ನೋಂದಣಿಗೆ ಫೆ. 13 ಕೊನೆಯ ದಿನವಾಗಿದೆ. ಹಡಗಲಿ ಮುಖ್ಯ ಮಾರುಕಟ್ಟೆಯಲ್ಲಿ 1481 ರೈತರಿಂದ 56,927 ಕ್ವಿಂಟಲ್ ಹಾಗೂ ಹೊಳಲು ಉಪ ಮಾರುಕಟ್ಟೆಯಲ್ಲಿ 1692 ರೈತರಿಂದ 61,302 ಕ್ವಿಂಟಲ್ ನೋಂದಣಿಯಾಗಿದೆ. ಮಾರಾಟ ರಸೀದಿಗೆ ಖರೀದಿದಾರರು ರೈತರಿಂದ ಹಣ ಪಡೆದಿದ್ದರೆ ಕ್ರಮ ಜರುಗಿಸುತ್ತೇವೆ’ ಎಂದು ಎಪಿಎಂಸಿ ಕಾರ್ಯದರ್ಶಿ ತಿಮ್ಮಪ್ಪ ನಾಯಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.