ಹೊಸಪೇಟೆ: ನಗರದಿಂದ ಸಂಡೂರಿನ ವರೆಗೆ ಕೈಗೊಂಡಿರುವ ‘ಸಮಾಜಮುಖಿ’ ನಡಿಗೆಗೆ ಶುಕ್ರವಾರ ಇಲ್ಲಿ ವಿರಕ್ತ ಮಠದ ಪ್ರಭು ಸ್ವಾಮೀಜಿ, ಚಿಂತಕ ರಹಮತ್ ತರೀಕೆರೆ ಚಾಲನೆ ನೀಡಿದರು.
‘ಸಮಾಜಮುಖಿ’ ಬರಹ ಹೊಂದಿದ ಶ್ವೇತ ವರ್ಣದ ಟೋಪಿಗಳನ್ನು ಧರಿಸಿಕೊಂಡು ಜನ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಸಮಾಜಮುಖಿ ಓದುಗರ ಬಳಗದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಹಮತ್ ತರೀಕೆರೆ ಅವರು ‘ಸಮಾಜಮುಖಿ’ ಮಾಸಿಕ ಸಂಚಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ‘ಶರಣರು, ಸೂಫಿ ಸಂತರು, ವಿದ್ವಾಂಸರಿಂದ ನಮ್ಮ ಚಿಂತನಾ ಪರಂಪರೆ ಬಹಳ ಗಟ್ಟಿಯಾಗಿದೆ. ಆದರೆ, ಕರ್ನಾಟಕ ಅದರ ವಿರುದ್ಧ ದಿಕ್ಕಿಗೆ ಹೋಗುತ್ತಿರುವುದು ಕಳವಳದ ಸಂಗತಿ’ ಎಂದು ಹೇಳಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೊದಲ ಆದ್ಯತೆ ಸಿಗಬೇಕು. ಆದರೆ, ಅದನ್ನು ಹೊಸಕಿ ಹಾಕಲಾಗುತ್ತಿದೆ. ಪ್ರಭುತ್ವದ ತಪ್ಪುಗಳನ್ನು ಎತ್ತಿ ತೋರಿಸುವವರನ್ನು ಸಮಾಜಘಾತುಕ ಶಕ್ತಿಗಳಂತೆ ಬಿಂಬಿಸಲಾಗುತ್ತಿದೆ’ ಎಂದರು.
ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿ, ‘ಈ ದೇಶದ ಸಂವಿಧಾನ, ನ್ಯಾಯಾಲಯ ಎಲ್ಲಕ್ಕಿಂತ ಪರಮೋಚ್ಚವಾದುದು. ಎಲ್ಲರೂ ಅವುಗಳನ್ನು ಗೌರವಿಸಬೇಕು. ಸಂಡೂರಿನ ಕುಮಾರಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಿಕ್ಕಿದೆ. ಅದೇ ರೀತಿ ಶಬರಿಮಲೆಯಲ್ಲೂ ಪ್ರವೇಶ ಸಿಗಬೇಕು. ಕಾನೂನಿಗಿಂತ ಯಾರು ದೊಡ್ಡವರಲ್ಲ’ ಎಂದು ಹೇಳಿದರು.
ಪತ್ರಿಕೆಯ ಸಂಪಾದಕ ಚಂದ್ರಕಾಂತ ವಡ್ಡು, ಸಂಚಾಲಕರಾದ ದುರುಗಪ್ಪ ಪೂಜಾರ, ಶ್ರೀಶೈಲ ಆಲದಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.