
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ತಾಂಡಾದ ಬಂಜಾರ ಸಮಾಜದ ಬಾಂಧವರು ಸೋಮವಾರ ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಿದರು.
ಸೇವಾಲಾಲ್ ಜಯಂತಿಯ ಅಂಗವಾಗಿ ಸಂಜೆ ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಆರಂಭವಾದ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆ ತಾಂಡಾವರೆಗೆ ನಡೆಯಿತು.
ನಂದಿಧ್ವಜ ಕುಣಿತ, ಸಮಾಳ, ಜಾಂಜ್ ಮೇಳದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ತಾಂಡಾದ ಯುವತಿಯರು ಕಳಸ ಹೊತ್ತು ಮೆರಗು ನೀಡಿದರೆ, ಕೆಲ ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಪು ಧರಿಸಿ ಲಂಬಾಣಿ ನೃತ್ಯ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು.
ಇನ್ನು ಯುವಕರು ವಾದ್ಯಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಕುಣಿಯುತ್ತಾ ಸಾಗಿದ್ದು ಕಂಡು ಬಂದಿತು. ಮೆರವಣಿಗೆಯಲ್ಲಿ. ಸುಶೀಲನಗರ ಪೀಠದ ತಿಪ್ಪೇಸ್ವಾಮಿ ಸ್ವಾಮೀಜಿ, ಶಿವಪ್ರಕಾಶ ಸ್ವಾಮೀಜಿ ಸೇರಿದಂತೆ ತಾಂಡಾದ ಮುಖಂಡರು, ಹಿರಿಯರು, ಯುವಕರು, ಮಹಿಳೆಯರು ಭಾಗವಹಿಸಿದ್ದರು. ರಾತ್ರಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.