ಹೊಸಪೇಟೆ:ಸ್ವಸಹಾಯ ಸಂಘಗಳಿಗೆ ಸಾಲ ನೀಡಿ ಕಿರುಕುಳ ನೀಡುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಯಮ್ಮ ಶಕ್ತಿ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್, ಡಿ.ವೈ.ಎಸ್ಪಿ. ವಿ. ರಘುಕುಮಾರ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.
’ನಗರದಲ್ಲಿನ ಮಹಿಳೆಯರಿಗೆ ಸಂಘಗಳನ್ನು ಕಟ್ಟಿಕೊಳ್ಳುವಂತೆ ಹೇಳಿ, ಅವರಿಗೆ ಸಾಲ ನೀಡಿ, ನಂತರ ಸಾಲ ವಸೂಲಾತಿಗೆ ಏಜೆಂಟರ ಮೂಲಕ ಮಾನಸಿಕ ಕಿರುಕುಳ, ದೌರ್ಜನ್ಯ ಎಸಗಲಾಗುತ್ತಿದೆ. ಒಬ್ಬ ಮಹಿಳೆ ಸಾಲ ಕಟ್ಟದಿದ್ದಲ್ಲಿ ಇಡೀ ಸಂಘದ ಮಹಿಳೆಯರನ್ನು ಹೊಣೆಗಾರರಾಗಿ ಮಾಡಲಾಗುತ್ತಿದೆ‘ ಎಂದು ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಆರೋಪಿಸಿದ್ದಾರೆ.
’ಕಿರುಕುಳಕ್ಕೆ ಬೇಸತ್ತು ಕೆಲ ಮಹಿಳೆಯರು ಊರು ಬಿಟ್ಟು ಹೋಗಿದ್ದಾರೆ. ಕೆಲವರು ಸಾಲ ಕಟ್ಟಲಾಗದೇ ಆತ್ಮಹತ್ಯೆಗೆ ಮುಂದಾಗಿದ್ದರು. ಕೂಡಲೇ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅಮಾಯಕ ಮಹಿಳೆಯರು ಬಲಿಯಾಗುವ ಸಾಧ್ಯತೆ ಇದೆ‘ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಘದ ಲಲಿತಾ, ಬೀನಾ, ರೂಪ, ರಾಧ, ಲಕ್ಷ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.